ಮುಂಬೈ : ‘ಶಿವಸೇನಾ ಯಾರಿಗೆ ಸೇರಿದ್ದು ಎಂದು ಪಾಕಿಸ್ತಾನಕ್ಕೂ ತಿಳಿದಿದೆ‘ ಎಂಬ ಉದ್ಧವ್ ಠಾಕ್ರೆ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ತಿರುಗೇಟು ನೀಡಿದ್ದು, ‘ಶಿವಸೇನಾ ಯಾರಿಗೆ ಸೇರಿದ್ದು ಎಂದು ನಿರ್ಧರಿಸಲು ಪಾಕಿಸ್ತಾನದ ಪ್ರಮಾಣ ಪತ್ರ ಬೇಕಿರುವುದು ನಿಜಕ್ಕೂ ದುರದೃಷ್ಟಕರ ‘ ಎಂದು ಹೇಳಿದ್ದಾರೆ.
ಭಾನುವಾರ ಸಂಜೆ ಉತ್ತರ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಪಚೋರಾದಲ್ಲಿ ನಡೆದ ಶಿವಸೇನಾ ಪಕ್ಷದ (ಉದ್ಬವ್ ಠಾಕ್ರೆ ಬಣ) ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಉದ್ದವ್ ಠಾಕ್ರೆ, ‘ಜನರಿಂದ ನಮ್ಮ ಪಕ್ಷಕ್ಕೆ ಸಿಗುತ್ತಿರುವ ಬೆಂಬಲ ನೋಡಿದರೆ ಪಾಕಿಸ್ತಾನವೂ ಹೇಳುತ್ತದೆ ಶಿವಸೇನೆ ಯಾರಿಗೆ ಸೇರಿದ್ದು ಎಂದು. ಆದರೆ, ಚುನಾವಣಾ ಆಯೋಗಗಕ್ಕೆ ತಿಳಿಯುತ್ತಿಲ್ಲ. ಕಣ್ಣಿನ ಪೊರೆಯಿಂದ ಚುನಾವಣಾ ಆಯೋಗಗಕ್ಕೆ ಶಿವಸೇನಾ ಯಾರಿಗೆ ಸೇರಿದ್ದು ಎಂದು ತಿಳಿಯಲಿಲ್ಲ ಎನ್ನಿಸುತ್ತದೆ‘ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಏಕನಾಥ ಶಿಂದೆ ಪ್ರತಿಕ್ರಿಯೆ ನೀಡಿದ್ದಾರೆ.