ನವದೆಹಲಿ: ಕೆಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಮ್ಮು ಕಾಶ್ಮೀರ ವಿಧಾನಸಭಾ ಕ್ಷೇತ್ರ ಮರು ವಿಂಗಡಣೆಯ ಸಾಧ್ಯತೆಯ ಬಗ್ಗೆ ಕೇಂದ್ರ ಸರ್ಕಾರವು ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಈ ಕಾರ್ಯವನ್ನು ಜಾರಿಗೊಳಿಸಲು ಕೆಂದ್ರ ಗೃಹ ಇಲಾಖೆಯು ಪ್ರತ್ಯೇಕ ‘ಮರು ವಿಂಗಡಣಾ ಆಯೋಗ’ ರಚಿಸಲಿದ್ದು, ಈ ಆಯೋಗವು ಜಮ್ಮು ವಲಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಸಾಧ್ಯತೆ ಇದೆ. ಪ್ರಸಕ್ತ ವಿಧಾನಸಭೆಯಲ್ಲಿ ಕಾಶ್ಮೀರ ವಲಯ 46 ಹಾಗೂ ಜಮ್ಮು ವಲಯ 37 ಸದಸ್ಯರ ಪ್ರಾತಿನಿಧ್ಯವನ್ನು ಹೊಂದಿದೆ.
ಕೇಂದ್ರ ಸರ್ಕಾರ ನಿರೀಕ್ಷಿಸಿದಂತೆ ಎಲ್ಲವೂ ನಡೆದರೆ ಮುಂದಿನ ದಿನಗಳಲ್ಲಿ ಜಮ್ಮು ವಲಯದ ಮುಸ್ಲಿಮೇತರ ವ್ಯಕ್ತಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿದೆ. ಆ ಮೂಲಕ ಬಿಜೆಪಿಗೆ ಆ ರಾಜ್ಯದಲ್ಲೂ ತನ್ನ ಶಕ್ತಿ ವರ್ಧನೆಗೆ ಅವಕಾಶ ಸಿಕ್ಕಂತಾಗುತ್ತದೆ. ಕಾಂಗ್ರೆಸ್ನ ಗುಲಾಂನಬಿ ಆಜಾದ್ ಬಿಟ್ಟರೆ ಈವರೆಗೆ ಜಮ್ಮು ಭಾಗದ ಯಾವ ವ್ಯಕ್ತಿಯೂ ರಾಜ್ಯದ ಮುಖ್ಯಮಂತ್ರಿ ಆಗಿಲ್ಲ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ, ಸಂವಿಧಾನದ ವಿಧಿ 370 ಮತ್ತು 35(ಎ)ಅನ್ನು ರದ್ದು ಮಾಡುವ ಬಿಜೆಪಿಯ ಯೋಜನೆಗೆ ಪೂರಕವಾಗಿ ಕ್ಷೇತ್ರ ವಿಂಗಡಣೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ‘ಒತ್ತಾಯಪೂರ್ವಕವಾದ ವಿಭಜನೆಯು ಜಮ್ಮು ಕಾಶ್ಮೀರದ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಇನ್ನೊಂದು ಪ್ರಯತ್ನ ಎನಿಸಲಿದೆ’ ಎಂದಿದ್ದಾರೆ.
‘ಜನಾಭಿಪ್ರಾಯ ಪಡೆಯದೇ ಮಾಡುವ ಯಾವುದೇ ಬದಲಾವಣೆಯನ್ನು ನಾವು ವಿರೋಧಿಸುತ್ತೇವೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ನ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಈಗ ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಬೇಕಾದರೆ ಪುನಃ ಅಲ್ಲಿನ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಈಗ ರಾಷ್ಟ್ರಪತಿ ಆಡಳಿತ ಇರುವುದರಿಂದ ತಿದ್ದುಪಡಿ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.
ಯಾತ್ರೆ ನಂತರ ಚುನಾವಣೆ
ನವದೆಹಲಿ: ಮುಂದಿನ ತಿಂಗಳು ಅಮರನಾಥ ಯಾತ್ರೆ ಆರಂಭವಾಗಲಿದ್ದು, ಅದು ಮುಗಿದ ನಂತರ ಜಮ್ಮು ಮತ್ತು ಕಾಶ್ಮೀರದ ಚುನಾವಣಾ ದಿನಾಂಕ ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.