ನವದೆಹಲಿ: ಭಾರತದ ಬಾಕ್ಸರ್ ಮೇರಿಕೋಮ್ ಮತ್ತು ಭಾರತದ ಬಾಕ್ಸಿಂಗ್ ತಂಡದ 30 ಸದಸ್ಯರಿದ್ದ ಸ್ಪೈಸ್ ಜೆಟ್ ವಿಮಾನವು ದುಬೈನಲ್ಲಿ ಸುಮಾರು 45 ನಿಮಿಷಗಳ ಕಾಲ ಸುತ್ತುವರಿದು, ಇಂಧನ ತುರ್ತು ಘೋಷಿಸಿ ಬಳಿಕ ವಿಮಾನವನ್ನು ಇಳಿಸಲು ಅನುಮತಿ ನೀಡಿದ ಘಟನೆ ಶನಿವಾರ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ ಎಂದೂ ಮೂಲಗಳು ಹೇಳಿವೆ.
ಕೋವಿಡ್–19 ನಿಬಂಧನೆಯ ನಡುವೆಯೂ ಮೇ 24 ಮತ್ತು ಜೂನ್ 1ರಂದು ನಡೆಯಲಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್–2021ನಲ್ಲಿ ಭಾಗವಹಿಸಲು ಭಾರತದ ಬಾಕ್ಸಿಂಗ್ ತಂಡವನ್ನು ದುಬೈಗೆ ಕರೆದೊಯ್ಯಲು ಸ್ಪೈಸ್ ಜೆಟ್ ಸಂಸ್ಥೆಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರದಿಂದ ಅನುಮತಿ ಪಡೆದಿತ್ತು ಎನ್ನಲಾಗಿದೆ.
ಆದರೂ, ಸ್ಪೈಸ್ ಜೆಟ್ ವಿಮಾನವು ಯುಎಇಯ ವಾಯುಪ್ರದೇಶದಲ್ಲಿ ಸುಮಾರು 45 ನಿಮಿಷಗಳ ಕಾಲ ಕಾಯಬೇಕಾಯಿತು. ದುಬೈ ವಿಮಾನ ನಿಲ್ದಾಣದ ವಾಯುಸಂಚಾರ ನಿಯಂತ್ರಣ ವ್ಯವಸ್ಥೆಯು ವಿಮಾನ ಇಳಿಯಲು ಅವಕಾಶ ನೀಡುವುದೇ ಇಲ್ಲವೇ ಎನ್ನುವ ಗೊಂದಲವುಂಟಾಗಿ, ಇಂಧನ ತುರ್ತುಪರಿಸ್ಥಿತಿ ಘೋಷಿಸಲಾಯಿತು ಎಂದು ಮೂಲಗಳು ತಿಳಿಸಿವೆ.
‘ಭಾರತದ 31 ಬಾಕ್ಸರ್ಗಳು ಮತ್ತು ಆರು ಸಿಬ್ಬಂದಿಯನ್ನೊಳಗೊಂಡ ಸ್ಪೈಸ್ಜೆಟ್–142 ವಿಮಾನವು ನವದೆಹಲಿಯ ವಿಮಾನ ನಿಲ್ದಾಣದಿಂದ ಶನಿವಾರ ಮುಂಜಾನೆ 2.20ಕ್ಕೆ ಹೊರಟು ಬೆಳಿಗ್ಗೆ 6.20ಕ್ಕೆ ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ದುಬೈ ತಲುಪಿದ್ದು, ಅವರು ಸರಿಯಾದ ದಾಖಲೆಗಳನ್ನು ಹೊಂದಿದ್ದಾರೆ’ ಎಂದು ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಕಾರಣಕ್ಕಾಗಿ ಯುಎಇಯು ಏ. 25ರಿಂದ ಭಾರತದಿಂದ ಬರುವ ಎಲ್ಲಾ ಪ್ರಯಾಣಿಕರನ್ನು ನಿಷೇಧಿಸಿದೆ.