ತಿರುವನಂತಪುರ: ಕೇರಳದಲ್ಲಿ ಹೊಸದಾಗಿ ಕೋವಿಡ್–19 ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ವ್ಯಕ್ತಿಗತ ಅಂತರ ಕಾಪಾಡಿಕೊಳ್ಳದಿರುವುದೇ ಮತ್ತೆ ಈ ಪಿಡುಗು ಹೆಚ್ಚಾಗಲು ಕಾರಣ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಹೀಗಾಗಿ ರಾಜ್ತ ಸರ್ಕಾರ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ವ್ಯಕ್ತಿಗತ ಅಂತರ ಕಾಪಾಡದೇ ಇರುವುದುನೂರು ಜನರ ಪೈಕಿ 65 ಜನರಲ್ಲಿ ಕೋವಿಡ್–19 ಕಾಣಿಸಿಕೊಳ್ಳಲು ಕಾರಣ ಎಂದು ತಿರುವನಂತಪುರ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯವಿಜ್ಞಾನ ವಿಭಾಗ ನಡೆಸಿದ ಅಧ್ಯಯನ ತಿಳಿಸಿದೆ.
ಕೋವಿಡ್–19 ಪ್ರಸರಣ ತಡೆಯುವ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು.
‘ವ್ಯಕ್ತಿಗತ ಅಂತರ ಕಾಪಾಡುವುದು ಸೇರಿದಂತೆ ಇತರ ನಿಯಮಗಳನ್ನು ಜಾರಿಗೊಳಿಸಬೇಕು. ಫೆಬ್ರುವರಿ ಮಧ್ಯಾವಧಿ ಒಳಗಾಗಿ ಸೋಂಕಿನ ಪ್ರಸರಣ ತಡೆಯಲು ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು’ ಎಂಬ ವಿಷಯ ಸಭೆಯಲ್ಲಿ ಚರ್ಚೆಯಾಯಿತು ಎಂದು ಮೂಲಗಳು ಹೇಳಿವೆ.
‘ಶೇ 56ರಷ್ಟು ಜನರಿಗೆ ಅವರ ಮನೆಯ ವಾತಾವರಣದಲ್ಲಿಯೇ ಸೋಂಕು ಹರಡುತ್ತಿದೆ. ಶೇ 45ರಷ್ಟು ಜನರು ಮಾಸ್ಕ್ ಧರಿಸದ ಕಾರಣ ಸೋಂಕಿಗೆ ಒಳಗಾಗುತ್ತಿದ್ದಾರೆ. ಶೇ 30 ರಷ್ಟು ಜನರಲ್ಲಿ ಲಕ್ಷಣರಹಿತ ಕೋವಿಡ್–19 ಕಾಣಿಸಿಕೊಂಡಿದೆ’ ಎಂದೂ ಅಧ್ಯಯನದಿಂದ ತಿಳಿದುಬಂದಿದೆ.
ಕಠಿಣ ನಿಯಮಗಳನ್ನು ಮತ್ತೆ ಜಾರಿಗೊಳಿಸುವ ಜೊತೆಗೆ, ಆರ್ಟಿಪ–ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ವೈದ್ಯರು ಒತ್ತಾಯಿಸಿದ್ದಾರೆ.
ಬುಧವಾರ ಒಂದೇ ದಿನ ಕೇರಳದಲ್ಲಿ 5,659 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 9,05,591ಕ್ಕೆ ಏರಿದೆ.