ಕೊಚ್ಚಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ತನಿಖೆಯ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಮತ್ತು ಕೆಲ ಸಚಿವರ ಮೇಲೆ ಆರೋಪ ಮಾಡಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಕೇರಳ ಹೈಕೋರ್ಟ್ಗೆ ಈ ಕುರಿತು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹಗರಣದಲ್ಲಿ ಯುಇಎ ರಾಯಭಾರ ಕಚೇರಿ ಅಧಿಕಾರಿಗಳು ಭಾಗಿಯಾಗಿರುವ ಆರೋಪವಿದೆ.
ಸಿಆರ್ಪಿಸಿ ಸೆಕ್ಷನ್ 108, 164ರಡಿ ನೀಡಿದ ಹೇಳಿಕೆಯಲ್ಲಿ ‘ಆಘಾತಕಾರಿ’ ಮಾಹಿತಿ ನೀಡಿದ್ದಾರೆ ಎಂದು ಕಸ್ಟಮ್ಸ್ (ನಿಯಂತ್ರಣ) ಕಮಿಷನರ್ ಸುಮಿತ್ ಕುಮಾರ್ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಅವರಿಗೆ ಯುಎಇ ರಾಯಭಾರ ಕಚೇರಿಯ ಹಿಂದಿನ ರಾಯಭಾರಿ ಜೊತೆಗೆ ಒಡನಾಟ ಇತ್ತು. ನಿಯಮಬಾಹಿರವಾಗಿ ಹಣಕಾಸು ವಹಿವಾಟು ನಡೆಯುತ್ತಿತ್ತು. ಮುಖ್ಯಮಂತ್ರಿ ಮತ್ತು ಸ್ಪೀಕರ್ ಅವರ ಸೂಚನೆಯ ಮೇರೆಗೆ ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದೆ ಎಂದು ಸ್ವಪ್ನಾ ಸುರೇಶ್ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.
ಯುಎಇ ಕಾನ್ಸುಲೇಟ್ನ ಹಣಕಾಸು ವಿಭಾಗದ ಮಾಜಿ ಮುಖ್ಯಸ್ಥೆಯು ತಿರುವನಂತಪುರಂನಿಂದ ಮಸ್ಕಟ್ಗೆ ಸುಮಾರು ₹1.30 ಕೋಟಿಗೆ ಸಮನಾದ ಡಾಲರ್ ಸಾಗಣೆ ಕುರಿತ ಪ್ರಕರಣಕ್ಕೆ ಸಂಬಂಧಿಸಿ ಈ ಹೇಳಿಕೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.