ಭುವನೇಶ್ವರ (ಒಡಿಶಾ): ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಸಂಭವಿಸಿದ ನೂಕುನುಗ್ಗಲು, ಭಕ್ತರ ದಟ್ಟಣೆಯಿಂದಾಗಿ 10 ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಯ ಸಂಕೇತವಾಗಿ ‘ತುಳಸಿ ಯಾತ್ರೆ’ ಹಮ್ಮಿಕೊಂಡಿದೆ.
ಒಡಿಶಾದಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ‘ತುಳಸಿ ಯಾತ್ರೆ’ ಹಮ್ಮಿಕೊಂಡಿರುವುದಾಗಿ ತಿಳಿಸಿದೆ. ಆದರೆ ದಿನಾಂಕವನ್ನು ಇನ್ನು ನಿರ್ಧರಿಸಲಾಗಿಲ್ಲ, ಮುಂದಿನ ದಿನಗಳಲ್ಲಿ ಯಾತ್ರೆಯ ದಿನ ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ರಾಜ್ಯದ 314 ಬ್ಲಾಕ್ಗಳ ಪ್ರತಿ ಮನೆಗಳಿಂದ ತುಳಸಿ ಎಲೆಗಳನ್ನು ಸಂಗ್ರಹಿಸಿ ಭುವನೇಶ್ವರದಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ತರಲಾಗುವುದು. ನಂತರ ಪುರಿಗೆ ತೆರಳಿ ಜಗನ್ನಾಥನಿಗೆ ಅರ್ಪಿಸಲಾಗುವುದು’ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶರತ್ ಪಟ್ನಾಯಕ್ ಅವರು ಹೇಳಿದರು.
‘ಕಾರ್ತಿಕ ಮಾಸದ ಪ್ರಯುಕ್ತ ಜಗನ್ನಾಥನ ದರ್ಶನ ಪಡೆಯಲು ದೇಗುಲಕ್ಕೆ ಅಪಾರ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ಆದರೆ ಆಡಳಿತ ಮಂಡಳಿಯವರು ದೇಗುಲದ ನಾಲ್ಕು ಪ್ರವೇಶ ದ್ವಾರಗಳ ಪೈಕಿ ಮೂರನ್ನು ಮುಚ್ಚಿದ್ದಾರೆ. ಕೇವಲ ಸಿಂಘ ದ್ವಾರದ ಮೂಲಕ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ’ ಎಂದರು.
ಕಾರ್ತಿಕ ಮಾಸದ ಕೊನೆಯ ಐದು ದಿನಗಳು ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಬಹುದು. ಆದ್ದರಿಂದ ಕಾಲ್ತುಳಿತದಂಥ ಘಟನೆಗಳನ್ನು ತಪ್ಪಿಸಲು ನಾಲ್ಕೂ ದ್ವಾರಗಳನ್ನು ತೆರೆಯಬೇಕೆಂದು ನಾವು ಆಗ್ರಹಿಸುತ್ತೇವೆ’ ಎಂದು ಅವರು ಹೇಳಿದರು.