ಪಣಜಿ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದರು.
ಶ್ರೀಪಾದ್ ಅವರು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರು ಗೋವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಚಿಕಿತ್ಸೆ ಪಡೆಯುತ್ತಿದ್ದಾರೆ.
'ಏಮ್ಸ್ ಮತ್ತು ಜಿಎಂಸಿಎಚ್ ವೈದ್ಯರ ಜಂಟಿ ತಂಡವು ಸಚಿವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಂಗಳವಾರ ಏಮ್ಸ್ ವೈದ್ಯರ ತಂಡವು ಗೋವಾಕ್ಕೆ ಆಗಮಿಸಿತ್ತು. ಈ ವೇಳೆ ವೈದ್ಯರ ತಂಡವು ಶ್ರೀಪಾದ್ ನಾಯಕ್ ಅವರ ಆರೋಗ್ಯವನ್ನು ಪರಿಶೀಲಿಸಿತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಮಂಗಳವಾರ ಜಿಎಂಸಿಎಚ್ಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು,‘ ಅವಶ್ಯಕತೆಯಿದ್ದಲ್ಲಿ ಶ್ರೀಪಾದ್ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಗುವುದು’ ಎಂದರು.