ಪಟ್ನಾ: ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಹಿಂದೂ–ಮುಸ್ಲಿಂ ವಿಚಾರ, ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಇದರ ಫಲವಾಗಿ ಅಲ್ಲಿನ ಯುವಕರು ಉದ್ಯೋಗಕ್ಕಾಗಿ ನಮ್ಮ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಬಿಹಾರದಲ್ಲಿ 1 ಲಕ್ಷ ಶಿಕ್ಷಕರ ನೇಮಕಾತಿಗೆ ಕಳೆದ ವಾರ ನಡೆದ ಪರೀಕ್ಷೆಗೆ ಅಂದಾಜು 10 ಲಕ್ಷ ಆಕಾಂಕ್ಷಿಗಳು ಹಾಜರಾಗಿದ್ದರು. ಇದರಲ್ಲಿ ಹೆಚ್ಚಿನವರು ಹೊರ ರಾಜ್ಯದವರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಾದವ್, 'ಸಾಕಷ್ಟು ಉದ್ಯೋಗಾಕಾಂಕ್ಷಿಗಳು ಉತ್ತರ ಪ್ರದೇಶದಿಂದ ಬರುತ್ತಿರುವುದನ್ನು ಕಂಡು ಸಂತಸವಾಯಿತು. ಅಲ್ಲಿನ ಸರ್ಕಾರವು ಹಿಂದೂ–ಮುಸ್ಲಿಂ ಗದ್ದಲ, ಬುಲ್ಡೋಜರ್ ಕಾರ್ಯಾಚರಣೆಯಲ್ಲೇ ಮುಳುಗಿದೆ' ಎಂದು ಹೇಳಿದ್ದಾರೆ.
ಆರ್ಜೆಡಿ ಪಕ್ಷದ ನಾಯಕರಾಗಿರುವ ಯಾದವ್ ಅವರು, 2020ರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು.
ಬಿಜೆಪಿ ವಿರೋಧಿ ಮೈತ್ರಿಕೂಟವು ಪಟ್ನಾ ಹಾಗೂ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಸಿರುವ ಎರಡು ಸಭೆಗಳಲ್ಲಿ ಭಾಗವಹಿಸಿರುವ ಯಾದವ್, ಮುಂಬೈನಲ್ಲಿ ನಿಗದಿಯಾಗಿರುವ ಮೂರನೇ ಸಭೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಜೆಡಿ(ಯು) ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿರೋಧ ಪಕ್ಷಗಳ ಮೈತ್ರಿಕೂಟ 'INDIA' ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.