ಲಖನೌ: ಉತ್ತರ ಪ್ರದೇಶ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಎಲ್ಎಎಲ್ಎಡಿ) ಅನುದಾನವನ್ನು ₹ 3 ಕೋಟಿಯಿಂದ ₹ 5 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಪ್ರಕಟಿಸಿದ್ದಾರೆ.
ಯೋಗಿಯ ಈ ಘೋಷಣೆಯನ್ನು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಬೆಂಬಲಿಸಿದ್ದಾರೆ.ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಂಎಲ್ಎಎಲ್ಎಡಿ ಅನುದಾನ ಬಳಕೆಯಾಗುತ್ತದೆ.
ವಿರೋಧ ಪಕ್ಷವಾಗಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಈ ಬಗ್ಗೆ ಮಾತನಾಡಿದ್ದು, ಎಂಎಲ್ಎಎಲ್ಎಡಿ ಅನುದಾನದ ಮೊತ್ತ ಹೆಚ್ಚಾಗಬೇಕು ಎಂದು ಎಲ್ಲ ಸದಸ್ಯರೂ ಬಯಸಿದ್ದರು. ವಿಧಾನಸಭೆ ನಾಯಕರು ಮುಖ್ಯಮಂತ್ರಿಯವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಯೋಗಿ ಅವರು ಕಳೆದ ಬಾರಿ (2017–2022) ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಅನುದಾನದ ಮೊತ್ತವನ್ನು 2020ರಲ್ಲಿ ₹ 2 ಕೋಟಿಯಿಂದ ₹ 3 ಕೋಟಿಗೆ ಹೆಚ್ಚಿಸಿದ್ದರು. ಅದಕ್ಕೂ ಮುನ್ನ 2019ರಲ್ಲಿ ₹ 1.5 ಕೋಟಿಯಿಂದ ₹ 2 ಕೋಟಿಗೆ ಏರಿಕೆ ಮಾಡಿದ್ದರು.