ಲಖನೌ: ಮನೆಯ ವಿದ್ಯುತ್ ಶುಲ್ಕ 1911ರಿಂದಲೂ ಬಾಕಿ ಉಳಿದಿದೆ ಎಂದು ಕಾರಣ ನೀಡಿ ₹ 2.24 ಲಕ್ಷ ಮೊತ್ತದ ವಿದ್ಯುತ್ ಬಿಲ್ ನೀಡಿದ್ದ ನಾಲ್ವರು ಅಧಿಕಾರಿಗಳಿಗೆ ದಂಡನೆಯ ರೂಪದಲ್ಲಿ ಎರಡು ಅನಾಥಾಶ್ರಮದ ಮಕ್ಕಳಿಗೆ ಊಟ ಒದಗಿಸಬೇಕು ಎಂದು ಆದೇಶಿಸಲಾಗಿದೆ.
ಉತ್ತರ ಪ್ರದೇಶ ವಿದ್ಯುತ್ ನಿಗಮದ ನಾಲ್ವರು ಅಧಿಕಾರಿಗಳು ತಪ್ಪಿತಸ್ಥರು ಎಂದು ಮಾಹಿತಿ ಹಕ್ಕು ಆಯೋಗ ತೀರ್ಮಾನಿಸಿತು. ವಿದ್ಯುತ್ ಬಿಲ್ನ ಶುಲ್ಕವನ್ನು ₹3,998ಕ್ಕೆ ಇಳಿಸಲಾಗಿದೆ ಎಂದು ಅಧಿಕಾರಿಗಳು ಬಳಿಕ ಆಯೋಗಕ್ಕೆ ತಿಳಿಸಿದರು.
ವಾರಾಣಸಿಯ ನಿವಾಸಿ ಉಮಾಶಂಕರ ಯಾದವ್ ಅವರ ಮನೆಯ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿ ₹ 2.24 ಲಕ್ಷದ ಬಿಲ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಆರ್ಟಿಐ ಅರ್ಜಿಗೂ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ, 2023ರಲ್ಲಿ ಅವರು ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.
ಉತ್ತರ ಪ್ರದೇಶ ವಿದ್ಯುತ್ ನಿಗಮದ ಸೂಪರಿಂಟೆಂಡೆಂಟ್ ಎಂಜಿನಿಯರ್ ಅನಿಲ್ ವರ್ಮಾ, ಕಾರ್ಯಕಾರಿ ಎಂಜಿನಿಯರ್ ಆರ್.ಕೆ.ಗೌತಮ್, ಉಪ ವಿಭಾಗೀಯ ಅಧಿಕಾರಿಗಳಾದ ಸರ್ವೇಶ್ ಯಾದವ್, ರವಿ ಅನಂದ್ ಅವರೇ ಶಿಕ್ಷೆಗೊಳಗಾದ ಅಧಿಕಾರಿಗಳು.
ಆಯೋಗವು ನೀಡಿದ್ದ ಹಲವು ಸಮನ್ಸ್ಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದಾಗ ಅವರ ವಿರುದ್ಧ ಬಂಧನ ವಾರಂಟ್ ಜಾರಿಮಾಡಲಾಗಿತ್ತು. ಪರಿಣಾಮ, ಅದಂಪುರ ಪೊಲೀಸ್ ಠಾಣೆಯಲ್ಲಿ ₹ 10 ಸಾವಿರ ಠೇವಣಿ ಇರಿಸಿದ್ದ ನಾಲ್ವರು ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದರು.
ಅನಾಥಾಶ್ರಮದ ಮಕ್ಕಳಿಗೆ ಊಟ ಒದಗಿಸುವುದರ ವೆಚ್ಚ ₹ 25,000 ಮೀರಬಾರದು. ಈ ಆದೇಶವು ಜಾರಿಯಾದ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಆಯೋಗವು ಆದೇಶಿಸಿತು. ಆರ್ಟಿಐ ಕಾಯ್ದೆಯ ಪ್ರಕಾರ, ದಂಡದ ಮೊತ್ತ ₹ 25,000 ಮೀರುವಂತಿಲ್ಲ.