ನವದೆಹಲಿ: ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗೆ ಸಹಾಯ ಮಾಡಬೇಕೆಂದು ಕಾಂಗ್ರೆಸ್ ಮನವಿ ಮಾಡಿದೆ.
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದ್ದು, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.
ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯಾವುದೇ ವಿಷಯದಿಂದ ವಿಚಲಿತರಾಗದೇ ಮತದಾನ ಮಾಡಿ ಎಂದು ಹೇಳಿದರು.
‘ಇಂದು ನಾಲ್ಕನೇ ಹಂತದ ಮತದಾನ ನಡೆಯತ್ತಿದೆ. ಜೂನ್ 4ರಂದು ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆಯಾಗಲಿದೆ ಎಂಬುವುದನ್ನು ಮೂರು ಹಂತದ ಮತದಾನಗಳಿಂದ ಸ್ಪಷ್ಟವಾಗಿದೆ. ನಿಮ್ಮ ಒಂದು ಮತವು ನಿಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವುದಲ್ಲದೆ ನಿಮ್ಮ ಇಡೀ ಕುಟುಂಬದ ಭವಿಷ್ಯವನ್ನು ಬದಲಾಯಿಸುತ್ತದೆ ಎಂಬುವುದು ನೆನಪಿರಲಿ’ ಎಂದರು.
‘ಮೊದಲ ಮೂರು ಹಂತಗಳಲ್ಲಿ ಪ್ರಜಾಪ್ರಭುತ್ವದ ಪರ ಮತ ಚಲಾಯಿಸುವ ಮೂಲಕ ಜನರು ನಿರಂಕುಶ ಶಕ್ತಿಗಳಿಂದ ಸಂವಿಧಾನವನ್ನು ಉಳಿಸಲು ತಮ್ಮ ಶಕ್ತಿ ತೋರಿಸಿದ್ದಾರೆ. ನ್ಯಾಯದ ಪರವಾಗಿ ಮತ ಚಲಾಯಿಸುವ ಮೂಲಕ ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಿಸಿ. ಸಮಾಜವನ್ನು ವಿಭಜಿಸುವ ದ್ವೇಷಪೂರಿತ ಭಾಷಣಗಳ ದಿಕ್ಕು ತಪ್ಪಿಸುವ ತಂತ್ರಗಳಿಂದ ಹಿಂಜರಿಯಬೇಡಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ನಲ್ಲಿ ತಿಳಿಸಿದರು.