ಕೋಲ್ಕತ್ತ: ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯು ರಾಜಕೀಯ ಪಂಜರದಲ್ಲಿ ಸಿಲುಕಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಅಭಿಪ್ರಾಯಪಟ್ಟಿದ್ದಾರೆ. ತಾವು ಕರೆದಿದ್ದ ಸಭೆಗೆ ಹೆಚ್ಚಿನ ಕುಲಪತಿಗಳು ಗೈರುಹಾಜರಾದ ಹಿಂದೆಯೇ ಅವರು ಹೀಗೇ ಕಿಡಿಕಾರಿದ್ದಾರೆ.
ಸಭೆಗೆ ಗೈರು ಹಾಜರಿಗೆ ಕುಲಪತಿಗಳಿಂದ ವಿವರಣೆ ಕೋರುತ್ತೇನೆ ಎಂದು ಅವರು ತಿಳಿಸಿದರು. ಅವರ ಎಚ್ಚರಿಕೆಯು ರಾಜ್ಯಸರ್ಕಾರದ ಜೊತೆಗಿನ ಮತ್ತೊಂದು ಸಂಘರ್ಷ ಎಂದೇ ವ್ಯಾಖ್ಯಾನಿಸಲಾಗಿದೆ.
'ಕೋವಿಡ್ ಬಿಕ್ಕಟ್ಟಿನ ನಡುವೆ ಶೈಕ್ಷಣಿಕ ಸ್ಥಿತಿಯನ್ನು ಅರಿಯಲು ಈ ಸಭೆ ಕರೆಯಲಾಗಿತ್ತು. ಗೈರುಹಾಜರಿ ಮೂಲಕ ಇದನ್ನು ವಿರೋಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೈಕ್ಷಣಿಕ ವ್ಯವಸ್ಥೆ ರಾಜಕೀಯ ಪಂಜರದಲ್ಲಿ ಸಿಲುಕಿದೆ ಎಂದು ಅರ್ಥಮಾಡಿಕೊಂಡಿದ್ದೇನೆ’ ಎಂದು ಟೀಕಿಸಿದರು.
ಧನಕರ್ ಅವರು ಬುಧವಾರ ಆನ್ಲೈನ್ ಮೂಲಕ ಎಲ್ಲ ಕುಲಪತಿಗಳ ಸಭೆ ಕರೆದಿದ್ದರು. ಒಬ್ಬ ಕುಲಪತಿ ಹೊರತುಪಡಿಸಿ ಎಲ್ಲರೂ ಸಭೆಗೆ ಗೈರು ಹಾಜರಾಗಿದ್ದರು.