ಮುಂಬೈ: ಕಾನೂನು ಮತ್ತು ಸುವ್ಯವಸ್ಥೆ ಹದೆಗೆಟ್ಟಿದ್ದು, ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕೆಂಬ ವಿರೋಧ ಪಕ್ಷಗಳ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, 288 ಸದಸ್ಯರ ವಿಧಾನಸಭೆಯಲ್ಲಿ ನಮಗೆ 225 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ.
ಮುಂಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಮುಂಬೈನಲ್ಲಿ ಭಯೋತ್ಪಾದಕರ ದಾಳಿ ಸಂದರ್ಭದಲ್ಲೂ ನಾವು ಅಂಥದ್ದೊಂದು ಒತ್ತಾಯ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ನಮ್ಮ 225 ಶಾಸಕರ ಬೆಂಬಲವಿರುವ ಸರ್ಕಾರವನ್ನು ವಜಾ ಮಾಡುವಂತೆ ವಿಪಕ್ಷಗಳು ಒತ್ತಾಯಿಸುತ್ತಿವೆ ಎಂದು ಹೇಳಿದ್ದಾರೆ.
‘ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂಬ ಭಯದ ವಾತಾವರಣ ಸೃಷ್ಟಿಸಲು ಕೆಲವು ಜನರು ಯತ್ನಿಸುತ್ತಿದ್ದಾರೆ’ ಎಂದು ಪವಾರ್ ಗುಡುಗಿದ್ದಾರೆ. ಇತ್ತೀಚಿನ ಕೆಲವು ಅಪರಾಧ ಪ್ರಕರಣಗಳನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ,
ಮುಂಬೈನಲ್ಲಿ ತಮ್ಮ ಪಕ್ಷದ ಮುಖಂಡ ಅಭಿಷೇಕ್ ಘೋಸಲ್ಕರ್ ಹತ್ಯೆ ಪ್ರಕರಣ ಮತ್ತು ತಿಂಗಳ ಆರಂಭದಲ್ಲಿ ಥಾಣೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಅವರು ಪೊಲೀಸ್ ಠಾಣೆಯಲ್ಲಿ ಶಿವಸೇನಾ(ಶಿಂದೆ ಬಣ) ಪಕ್ಷದ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿದ್ದನ್ನು ಉಲ್ಲೇಖಿಸಿ ಸರ್ಕಾರದ ವಜಾಕ್ಕೆ ಶಿವಸೇನಾ(ಯುಬಿಟಿ) ಬಣದ ಅಧ್ಯಕ್ಷ ಉದ್ಧವ್ ಠಾಕ್ರೆ ಒತ್ತಾಯಿಸಿದ್ದರು.