ಮುಂಬೈ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ಪಡೆದಿರುವ ಚುನಾವಣಾ ಬಾಂಡ್ಗಳನ್ನು ಹಿಂದಿರುಗಿಸುತ್ತಾರೆಯೇ’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪ್ರಶ್ನಿಸಿದರು.
‘ಚುನಾವಣಾ ನಿಧಿಗಾಗಿ ಕಾಂಗ್ರೆಸ್ ಪಕ್ಷದ ಕಪ್ಪು ಹಣದ ಮೂಲವನ್ನು ಈ ಯೋಜನೆ ತಡೆದಿದೆ. ಹೀಗಾಗಿ ಅವರು ಚುನಾವಣಾ ಬಾಂಡ್ಗಳ ಕುರಿತು ಟೀಕಸುತ್ತಿದ್ದಾರೆ’ ಎಂದು ಅವರು ದೂರಿದರು.
ರಾಜ್ಯ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘303 ಸಂಸದರನ್ನು ಹೊಂದಿರುವ ಬಿಜೆಪಿ ಒಟ್ಟು ಶೇ 30ರಷ್ಟು ಚುನಾವಣಾ ಬಾಂಡ್ಗಳನ್ನು ಪಡೆದುಕೊಂಡಿದೆ. ಆದರೆ ಉಳಿದ ಶೇ 70ರಷ್ಟು ಚುನಾವಣಾ ಬಾಂಡ್ಗಳನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಡೆದುಕೊಂಡಿವೆ’ ಎಂದರು.
‘ಯಾರಿಗೆಲ್ಲ ಬೆದರಿಕೆಗಳನ್ನು ಹಾಕಿ ಕಾಂಗ್ರೆಸ್ ಪಕ್ಷದವರು ಚುನಾವಣಾ ಬಾಂಡ್ಗಳನ್ನು ಪಡೆದಿದ್ದಾರೆ. ಅವರು ಈ ಚುನಾವಣಾ ಬಾಂಡ್ಗಳನ್ನು ಹಿಂದಿರುಗಿಸುತ್ತಾರೆಯೇ’ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಲು ರಾಹುಲ್ ಗಾಂಧಿ ಅವರಿಗೆ ಯಾವುದೇ ಹಕ್ಕಿಲ್ಲ. ದೇಶದಲ್ಲಿ ಮೋದಿ ಗ್ಯಾರಂಟಿ ಮಾತ್ರ ಕೆಲಸ ಮಾಡುತ್ತದೆ. ಮೋದಿ ಅವರ ಜನಪ್ರಿಯತೆಯಿಂದ ರಾಹುಲ್ ಅಸಮಾಧಾನಗೊಂಡಿದ್ದಾರೆ’ ಎಂದರು.