ಜೈಪುರ: ದುರಂತದ ಘಟನೆಯೊಂದರಲ್ಲಿ 34 ವರ್ಷದ ಮಹಿಳೆ, ಕೋವಿಡ್ನಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆ ವೇಳೆ ಚಿತೆ ಮೇಲೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯ ದೇಹ ಶೇ.70ರಷ್ಟು ಸುಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
74 ವರ್ಷದ ದಾಮೋದರ್ ದಾಸ್ ಶಾರದಾ ಎಂಬ ವ್ಯಕ್ತಿ ರಾಜಸ್ಥಾನದ ಬರ್ಮರ್ನ ಆಸ್ಪತ್ರೆಯಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದರು. ಅವರ ಮೃತದೇಹದ ಅಂತ್ಯಕ್ರಿಯೆ ನಡೆಸುವ ವೇಳೆ ಮೂವರು ಹೆಣ್ಣು ಮಕ್ಕಳ ಪೈಕಿ ಕಿರಿಯವಳಾದ ಚಂದ್ರ ಶಾರದಾ ಅವರು ಅಪ್ಪನ ಅಗಲಿಕೆಯ ನೋವಲ್ಲಿ ಉರಿಯುತ್ತಿದ್ದ ಚಿತೆ ಮೇಲೆ ಹಾರಿದ್ದಾರೆ.
ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಜೋಧ್ ಪುರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.
‘ದಾಮೋದರ್ ದಾಸ್ ಶಾರದಾಗೆ ಮೂವರು ಪುತ್ರಿಯರಿದ್ದು, ಪತ್ನಿ ಕೆಲ ಸಮಯದ ಹಿಂದೆ ನಿಧನರಾಗಿದ್ದರು. ಕಿರಿಯ ಮಗಳು ಅಂತ್ಯಕ್ರಿಯೆಯ ಚಿತೆ ಮೇಲೆ ಹಾರಿದರು’ ಎಂದು ಕೊಟ್ವಾಲಿ ಪೊಲೀಸ್ ಠಾಣಾಧಿಕಾರಿ ಪ್ರೇಮ್ ಪ್ರಕಾಶ್ ಹೇಳಿದ್ದಾರೆ.