ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತವು ಯುವ ಜನರ ಕನಸಿನ ಭಾರತವಾಗಲಿದೆ ಮತ್ತು ಭವಿಷ್ಯದಲ್ಲಿ ದೇಶವು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.
ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಸರ್ಕಾರದ 3ನೇ ಅವಧಿ ಜೂನ್ನಲ್ಲಿ ಪ್ರಾರಂಭವಾಗಲಿದೆ. ಆದರೆ ಹೊಸ ಯೋಜನೆಗಳು ಪ್ರಾರಂಭವಾಗಿರುವ ಪ್ರಮಾಣ ಮತ್ತು ವೇಗವು ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ ಎಂದರು.
ಭಾರತೀಯ ರೈಲ್ವೆಯು ಪರಿವರ್ತನೆಗೆ ಒಳಗಾಗುತ್ತಿದೆ. ಇದರಿಂದ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವವರಿಗೆ ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ವಿಕಸಿತ ಭಾರತ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಯುವಕರ ಪಾತ್ರ ಹಿರಿದು. ನಿಮ್ಮ ಕನಸು ಮೋದಿಯವರ ಸಂಕಲ್ಪ ಎಂದು ನಾನು ದೇಶದ ಪ್ರತಿಯೊಬ್ಬ ಯುವಕರಿಗೂ ಹೇಳಲು ಬಯಸುತ್ತೇನೆ. ನಿಮ್ಮ ಕನಸು , ನಿಮ್ಮ ಶ್ರಮ ಮತ್ತು ಮೋದಿಯವರ ಸಂಕಲ್ಪವು ‘ವಿಕಸಿತ ಭಾರತದ ಗ್ಯಾರಂಟಿ' ಎಂದು ಪ್ರಧಾನಿ ಹೇಳಿದರು.
ಅಮೃತ ಭಾರತ ನಿಲ್ದಾಣ ಯೋಜನೆ ಅಡಿ ದೇಶದ 554 ರೈಲು ನಿಲ್ದಾಣಗಳ ಪುನರಾಭಿವೃದ್ಧಿ, 1,500 ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು. ಇದು ದೇಶದಾದ್ಯಂತ ಪ್ರಮುಖ ರೈಲು ನಿಲ್ದಾಣಗಳನ್ನು, ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳನ್ನು ಪುನರಾಭಿವೃದ್ಧಿಗೊಳಿಸುವ ಸರ್ಕಾರದ ಉಪಕ್ರಮವಾಗಿದೆ.