ನವದೆಹಲಿ (ಪಿಟಿಐ): ಐಐಟಿಯಂತಹ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 4.5 ರಷ್ಟು ಒಳ ಮೀಸಲು ಒದಗಿಸಿದ್ದಕ್ಕೆ ಸಂಬಂಧಿಸಿದ ಆಧಾರ, ದಾಖಲೆಗಳನ್ನು ಕೇಂದ್ರ ಸರ್ಕಾರವು ಮಂಗಳವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿತು.
ಅಡಿಷನಲ್ ಸಾಲಿಸಿಟರ್ ಜನರಲ್ ಗೌರವ್ ಬ್ಯಾನರ್ಜಿ ಅವರು ವಿಷಯವನ್ನು ಪ್ರಸ್ತಾಪಿಸಿ ದಾಖಲೆಗಳನ್ನು ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ಜೆ.ಎಸ್. ಕೇಹರ್ ಅವರನ್ನು ಒಳಗೊಂಡ ಪೀಠದ ಮುಂದೆ ಮಂಡಿಸಿದರು. ಸಂಬಂಧಪಟ್ಟ ದಾಖಲೆಗಳನ್ನು ಮಂಗಳವಾರದ ಒಳಗಾಗಿ ಮಂಡಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪೀಠವು ಸೋಮವಾರ ನಿರ್ದೇಶಿಸಿತ್ತು.
ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿಗ ವರ್ಗಗಳಿಗೆ (ಒಬಿಸಿ) ನೀಡಲಾಗಿರುವ ಶೇಕಡಾ 27 ಮೀಸಲಿನ ಒಳಗೆಯೇ ಶೇಕಡಾ 4.5ರಷ್ಟು ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ಕಲ್ಪಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ರದ್ದು ಪಡಿಸಿದ ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿತ್ತು.
ಇಂತಹ ಸೂಕ್ಷ್ಮ ವಿಚಾರವನ್ನು ನಿಭಾಯಿಸಿದ ರೀತಿಗಾಗಿಯೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಾಲಯ ~ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುವಂತಹ ದಾಖಲೆಗಳನ್ನು ಹಾಜರು ಪಡಿಸಲು ವಿಫಲವಾದ ಕೇಂದ್ರ ನಂತರ ಹೈಕೋರ್ಟ್ ನ್ನು ದೂಷಿಸುತ್ತಿದೆ ಎಂದೂ ಅಸಮಾಧಾನ ವ್ಯಕ್ತ ಪಡಿಸಿತ್ತು.