ನವದೆಹಲಿ (ಪಿಟಿಐ): ಒಂಬತ್ತು ವರ್ಷಗಳ ಹಿಂದಿನ ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಜುಲೈ 4ರಂದು ಗುಜರಾತ್ ಹೈಕೋರ್ಟ್ಗೆ ಮೊದಲ ಆರೋಪಪಟ್ಟಿ ಸಲ್ಲಿಸಲಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕ ರಾಜೇಂದ್ರ ಕುಮಾರ್ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಸಿಬಿಐ ಕುಮಾರ್ ಅವರನ್ನು `ಮಾಫಿ ಸಾಕ್ಷಿ' ಎಂದು ಪರಿಗಣಿಸಿತ್ತು. 1979ನೇ ತಂಡದ ಐಪಿಎಸ್ ಅಧಿಕಾರಿಯಾಗಿರುವ ಅವರು ಇದೇ 31ರಂದು ನಿವೃತ್ತರಾಗಲಿದ್ದಾರೆ.
19 ವರ್ಷದ ಇಶ್ರತ್ ಹಾಗೂ ಇತರ ಮೂವರನ್ನು ಗುಜರಾತ್ ಪೊಲೀಸರು ಸಾಮೂಹಿಕವಾಗಿ ನಕಲಿ ಎನ್ಕೌಂಟರ್ನಲ್ಲಿ ಕೊಂದು ಹಾಕಿರುವ ಈ ಪ್ರಕರಣದ ವಿಚಾರಣೆಗೆ ಸಿಬಿಐ ಇನ್ನೂ ಹೆಚ್ಚಿನ ಕಾಲಾವಕಾಶ ಕೋರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಶ್ರತ್ ಎನ್ಕೌಂಟರ್ ಒಂದು ಪೂರ್ವ ನಿಯೋಜಿತ ಸಂಚಾಗಿದ್ದು ಸಮಗ್ರ ತನಿಖೆಯಾಗಬೇಕಿದೆ. ಕುಮಾರ್ ವಹಿಸಿದ ಪಾತ್ರ ಮತ್ತು ಇತರ ವಿಷಯಗಳ ಕುರಿತು ಇನ್ನೂ ಅನೇಕರನ್ನು ಪ್ರಶ್ನಿಸಬೇಕಾಗಿರುವ ಕಾರಣ ಕಾಲಾವಕಾಶದ ಅಗತ್ಯವಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.