ನವದೆಹಲಿ: ಎಮ್ಮೆ, ಕರುಗಳನ್ನು ಸಾಗಿಸುತ್ತಿದ್ದ ಐವರ ಮೇಲೆ ಇಲ್ಲಿನ ಬಾಬಾ ಹರಿದಾಸ್ ನಗರದಲ್ಲಿ ಗುಂಪೊಂದು ಶುಕ್ರವಾರ ರಾತ್ರಿ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಎಮ್ಮೆ ಕರುಗಳನ್ನು ಸಾಗಿಸುತ್ತಿದ್ದ ಪಿಕ್–ಅಪ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಸಂತ್ರಸ್ತರ ಮುಖ ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಹಲ್ಲೆಕೋರರನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಆದರೆ, ಅವರು ಸಮೀಪದ ಝರೊಡಾ ಕಲನ್ ಪ್ರದೇಶದವರಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಈದ್ ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮುಗಿಸಿ ರೈಲಿನಲ್ಲಿ ಹಿಂದಿರುಗುತ್ತಿದ್ದ ಮುಸ್ಲಿಂ ಬಾಲಕನನ್ನು ಗೋಮಾಂಸ ಸಾಗಾಟ ಮಾಡುತ್ತಿದ್ದಾನೆಂದು ಆರೋಪಿಸಿ ಗೋರಕ್ಷಕರು ಹತ್ಯೆ ಮಾಡಿದ್ದರು.
ದೇಶದಾದ್ಯಂತ ಹಲವೆಡೆ ಮುಸ್ಲಿಮರು ಗೋರಕ್ಷಕರ ದಾಳಿಗೆ ಗುರಿಯಾಗುತ್ತಿರುವ ಬೆನ್ನಲ್ಲೇ ಇತ್ತೀಚೆಗೆ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ದೆಹಲಿಯಲ್ಲಿ ಮತ್ತೆ ದಾಳಿ ನಡೆದಿದೆ.