ಕುಡಲ್ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವರು ಗುರುವಾರ ಕಾಂಗ್ರೆಸ್ ತೊರೆದಿದ್ದಾರೆ.
ವಿಧಾನಪರಿಷತ್ ಸದಸ್ಯತ್ವಕ್ಕೂ ಅವರು ರಾಜೀನಾಮೆ ನೀಡಿದ್ದಾರೆ. ರಾಣೆ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿ ದಟ್ಟವಾಗಿದೆ.
‘12 ವರ್ಷಗಳ ಹಿಂದೆ ಕಾಂಗ್ರೆಸ್ ಸೇರಿದ್ದಾಗ ನನ್ನನ್ನು ಮುಖ್ಯಮಂತ್ರಿ ಮಾಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಆಶ್ವಾಸನೆ ಉಳಿಸಿಕೊಳ್ಳಲಿಲ್ಲ. ಮುಂದೆ ಯಾವ ಪಕ್ಷ ಸೇರಬೇಕು ಎನ್ನುವಬಗ್ಗೆ ನಿರ್ಧರಿಸಿಲ್ಲ’ ಎಂದು ರಾಣೆ ತಿಳಿಸಿದ್ದಾರೆ.
‘ತಮ್ಮ ಪುತ್ರ ಹಾಗೂ ಮಾಜಿ ಸಂಸದ ನಿಲೇಶ್ ರಾಣೆ ಸಹ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಶಿವಸೇನಾದಲ್ಲಿದ್ದ ರಾಣೆ 2005ರ ಜುಲೈ 26ರಂದು ಕಾಂಗ್ರೆಸ್ ಸೇರಿದ್ದರು. ಬಳಿಕ ಕಾಂಗ್ರೆಸ್ ನೇತೃತ್ವ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು.
ಕೆಲವು ತಿಂಗಳ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ರಾಣೆ ಭೇಟಿಯಾಗಿದ್ದರು ಮತ್ತು ಗಣೇಶ ಉತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ರಾಣೆ ನಿವಾಸಕ್ಕೆ ತೆರಳಿದ್ದರು ಎನ್ನುವ ವರದಿಯಾಗಿತ್ತು.
‘ರಾಜೀನಾಮೆಗೆ ದಾವೂದ್ ನಂಟು ಹೇಳಿಕೆ ಕಾರಣವೇ?’
ನವದೆಹಲಿ: ಭೂಗತ ಪಾತಕಿ ದಾವೂದ್ ಜತೆಗೆ ರಾಣೆ ಅವರಿಗೆ ನಂಟು ಇದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಬುಧವಾರ ಹೇಳಿಕೆ ನೀಡಿದ್ದರು. ಅದರ ಮರುದಿನವೇ ರಾಣೆ ಕಾಂಗ್ರೆಸ್ ಬಿಟ್ಟಿದ್ದಾರೆ. ಈ ಎರಡು ಬೆಳವಣಿಗೆಗಳ ನಡುವೆ ಸಂಬಂಧ ಇದೆಯೇ ಎಂಬುದನ್ನು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.