ನವದೆಹಲಿ, (ಪಿಟಿಐ): `ಕಾಸಿಗಾಗಿ ಸುದ್ದಿ~ ವಿವಾದಕ್ಕೆ ಸಂಬಂಧಿಸಿದಂತೆ ದ್ವಿಸದಸ್ಯ ಸಮಿತಿ ನೀಡಿರುವ ವರದಿಯನ್ನು ಅಕ್ಟೋಬರ್ 10ರೊಳಗೆ ಬಹಿರಂಗಗೊಳಿಸುವಂತೆ ಕೇಂದ್ರೀಯ ಮಾಹಿತಿ ಆಯೋಗ ಮಂಗಳವಾರ ಭಾರತೀಯ ಪತ್ರಕರ್ತರ ಮಂಡಳಿಗೆ (ಪಿಸಿಐ) ನಿರ್ದೇಶಿಸಿದೆ.
ಕೆಲವು ಮಾಧ್ಯಮಗಳ ವಿರುದ್ಧ ಕೇಳಿ ಬಂದ `ಕಾಸಿಗಾಗಿ ಸುದ್ದಿ~ ಆರೋಪದ ತನಿಖೆಗಾಗಿ ಮಂಡಳಿ ನೇಮಿಸಿದ್ದ ಉಪ ಸಮಿತಿ ವರದಿ ನೀಡಿತ್ತು. ಈ ವರದಿಯ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ವರದಿ ಬಹಿರಂಗಗೊಳಿಸುವ ಕುರಿತು ಕಾನೂನು ತಜ್ಞರ ಸಲಹೆ ಪಡೆಯುತ್ತಿರುವುದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಮಂಡಳಿ ಸ್ಪಷ್ಟವಾಗಿ ಹೇಳಿತ್ತು. ಬಳಿಕ ಮಾಹಿತಿ ನೀಡಲು ಒಪ್ಪಿದ ಮಂಡಳಿ, ಅದಕ್ಕಾಗಿ ಹೆಚ್ಚಿನ ಶುಲ್ಕದ ಬೇಡಿಕೆ ಮುಂದಿಟ್ಟಿತು.
ಆದರೆ, ಈ ಕುರಿತು ತಮಗೆ ಮಂಡಳಿಯಿಂದ ಯಾವುದೇ ಪತ್ರ ಬಂದಿಲ್ಲ ಎಂದ ಅರ್ಜಿದಾರರು, ಕಾನೂನು ಪ್ರಕಾರ ಮಾಹಿತಿ ಬಹಿರಂಗಗೊಳಿಸುವುದು ಕಡ್ಡಾಯ ಎಂದು ಪಟ್ಟುಹಿಡಿದರು. ಮಾಹಿತಿ ಹಕ್ಕು ಕಾಯ್ದೆ ಅಡಿ ಸ್ವಯಂ ಪ್ರೇರಣೆಯಿಂದ ಕಡ್ಡಾಯವಾಗಿ ಮಾಹಿತಿ ಬಹಿರಂಗಗೊಳಿಸಬೇಕೆಂಬ ನಿಯಮವನ್ನು ಬಳಸಿಕೊಂಡ ಆಯೋಗ 19 (8) (ಎ) (111) ಕಲಂ ಅಡಿ ವರದಿ ಬಹಿರಂಗಕ್ಕೆ ಸೂಚನೆ ನೀಡಿದೆ.
ಅ. 10ರೊಳಗೆ ವರದಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ತಾಕೀತು ಮಾಡಿರುವ ಆಯೋಗದ ಆಯುಕ್ತ ಶೈಲೇಶ್ ಗಾಂಧಿ, ಅದಕ್ಕೂ ಮುನ್ನ ಸೆ. 30ರ ಒಳಗಾಗಿ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.