ಗುವಾಹಟಿ (ಪಿಟಿಐ): ತನ್ನ ಹಿಂದಿನ ಎಲ್ಲಾ ಅಪರಾಧಗಳನ್ನು ಮನ್ನಿಸಿ ಅಸ್ಸಾಂ ಜನರು ತನಗೆ ಕ್ಷಮೆ ನೀಡಬೇಕೆಂದು ಉಲ್ಫಾ ಸಂಘಟನೆಯ ಹಿರಿಯ ನಾಯಕ ಅನೂಪ್ ಚೇಟಿಯಾ ಸೋಮವಾರ ಕೋರಿದ್ದಾನೆ. ಅಲ್ಲದೆ, ‘ಶಾಂತಿ ಮಾತುಕತೆಗೆ ನಾನು ಸಿದ್ಧನಿದ್ದೇನೆ’ ಎಂದೂ ಎರಡು ದಶಕಗಳಿಂದ ಬಾಂಗ್ಲಾದೇಶದಲ್ಲಿ ತಲೆಮರಿಸಿಕೊಂಡಿದ್ದ ಚೇಟಿಯಾ ಹೇಳಿದ್ದಾನೆ.
ಎರಡು ಟಾಡಾ ಪ್ರಕರಣಗಳ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ಹೊರಬಂದ ನಂತರ ಮಾತನಾಡಿದ ಚೇಟಿಯಾ, ‘ನಮ್ಮಿಂದಾಗಿ ಜೀವ ಕಳೆದುಕೊಂಡ ಅಮಾಯಕ ಜನರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ ಮತ್ತು ಅವರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾನೆ.
‘ಶಾಂತಿ ಮಾತುಕತೆಗೆ ನಾನು ಬರುವುದಿಲ್ಲ ಎಂದೇ ಅನೇಕರು ಭಾವಿಸಿದ್ದಾರೆ. ಅಲ್ಲದೆ ನಾನು ಮತ್ತೆ ತಲೆಮರೆಸಿಕೊಳ್ಳಬಹುದು ಎಂದೂ ಕೆಲವರು ತಿಳಿದಿದ್ದಾರೆ. ಆದರೆ ಶಾಂತಿ ಮಾತುಕತೆಗೆ ನಾನು ಸಿದ್ಧನಿದ್ದೇನೆ’ ಎಂದು ಚೇತಿಯಾ ಹೇಳಿದ್ದಾನೆ.