ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳಲ್ಲಿನ ಖನಿಜ ವಿನಾಯಿತಿ ಅರ್ಜಿಗಳ ವಿಲೇವಾರಿಗಳಲ್ಲಿನ ನಿಧಾನಗತಿಯಿಂದ ಬೇಸರಗೊಂಡಿರುವ ಕೇಂದ್ರ ಸರ್ಕಾರ, ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದೆ.
ಸದ್ಯ ವಿವಿಧ ರಾಜ್ಯಗಳಲ್ಲಿ 65,337 ಖನಿಜ ವಿನಾಯಿತಿ ಅರ್ಜಿಗಳು ವಿಲೇ ವಾರಿಯಾಗದೆ ಹಾಗೇ ಉಳಿದುಕೊಂಡಿವೆ ಎಂದು ಗಣಿ ಸಚಿವಾಲಯ ತಿಳಿಸಿದೆ.
ಖನಿಜ ವಿನಾಯಿತಿ ಅರ್ಜಿಗಳು ಭಾರಿ ಪ್ರಮಾಣದಲ್ಲಿ ಬಾಕಿ ಉಳಿದಿವೆ. ಇದು ಎಲ್ಲ ಖನಿಜ ಸಮೃದ್ಧಿ ರಾಜ್ಯಗಳಲ್ಲಿ ಸಾಮಾನ್ಯವಾಗಿದೆ ಎಂದು ಸಚಿವಾಲಯ ಹೇಳಿದೆ. ಈ ನಿಟ್ಟಿನಲ್ಲಿ ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣ ಕಾಯಿದೆಯಲ್ಲಿನ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಹೇಳಿದೆ.
ಈ ನಡುವೆ ಗಣಿ ಗುತ್ತಿಗೆಗೆ ಪರ ವಾನಗಿ ನೀಡುವುದು ಸಹ ಹಲವಾರು ಕಾರಣಗಳಿಂದ ನಿಧಾನವಾಗಿ ಸಾಗಿದೆ. ಹೊಸ ಗುತ್ತಿಗೆಗಳಿಗೆ ಪರವಾನಗಿ ನೀಡುವುದು ಅಕ್ರಮ ಗಣಿಗಾರಿಕೆಯಿಂದ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.
ಕಳೆದ ಹಣಕಾಸು ವರ್ಷದಲ್ಲಿ 20 ರಾಜ್ಯಗಳಲ್ಲಿ 99,000 ಅಕ್ರಮ ಗಣಿ ಪ್ರಕರಣಗಳು ವರದಿಯಾಗಿವೆ. 2011-12ರಲ್ಲಿ ಈ ಸಂಖ್ಯೆ 96,000 ಆಗಿದ್ದರೆ 2010-11 ರಲ್ಲಿ 78,000 ರಷ್ಟಿತ್ತು.