ನವದೆಹಲಿ (ಪಿಟಿಐ/ಐಎಎನ್ಎಸ್): ಭಾರತದ ಹೊಸ ಸರ್ಕಾರದ ಜತೆ ರಾಜಕೀಯ ಸಂಬಂಧ ಬೆಳೆಸಲು ಚೀನಾ ತುದಿಗಾಲ ಮೇಲೆ ನಿಂತಿದೆ. ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಆಶಯದಿಂದ ಇಲ್ಲಿಗೆ ಬಂದಿರುವ ಚೀನಾ ವಿದೇಶಾಂಗ ಸಚಿವ ವಾಂಗ್ಯಿ ಅವರು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್್ ಅವರೊಂದಿಗೆ ಭಾನುವಾರ ಸುದೀರ್ಘ ಮಾತುಕತೆ ನಡೆಸಿದರು.
ಎನ್ಡಿಎ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮೊಟ್ಟ ಮೊದಲ ಉನ್ನತ ಮಟ್ಟದ ಮಾತುಕತೆ ಇದಾಗಿದೆ.
ವ್ಯಾಪಾರ ಹಾಗೂ ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲವರ್ಧನೆಯ ಮಾರ್ಗೋಪಾಯಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದರು.
ಗಡಿ ವಿವಾದ, ಅಕ್ರಮ ಒಳನುಸುಳುವಿಕೆ, ಭಾರತದ ಕೆಲವು ಪ್ರದೇಶಗಳ ಜನರಿಗೆ ಪ್ರತ್ಯೇಕ ಹಾಳೆಯ ಮೇಲೆ ವೀಸಾ ನೀಡುವಿಕೆ, ಬ್ರಹ್ಮಪುತ್ರಾ ನದಿಗೆ ಅಣೆಕಟ್ಟೆ ನಿರ್ಮಾಣ ಹಾಗೂ ಚೀನಾದ ಬಂಡವಾಳ ಹೂಡಿಕೆ ವೃದ್ಧಿ...ಇತ್ಯಾದಿ ವಿಷಯಗಳು ಉಭಯ ನಾಯಕರ ಮಾತುಕತೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾದವು ಎನ್ನಲಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್್ ಅವರ ವಿಶೇಷ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿರುವ ವಾಂಗ್್ ಅವರು, ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.
‘ಭಾರತದಲ್ಲಿನ ಬದಲಾವಣೆಯನ್ನು ಅಂತರರಾಷ್ಟ್ರೀಯ ಸಮುದಾಯ ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಚೀನಾ ಹಾಗೂ ಭಾರತದ ಆಕಾಂಕ್ಷೆಗಳಲ್ಲಿ ಅನೇಕ ಸಾಮ್ಯತೆಗಳಿವೆ’ ಎಂದು ವಾಂಗ್ ಹೇಳಿದ್ದಾರೆ.
ಫಲಪ್ರದ ಮಾತುಕತೆ: ‘ಸುಷ್ಮಾ ಹಾಗೂ ವಾಂಗ್್ ನಡುವೆ ಸೌಹಾರ್ದಯುತ ಹಾಗೂ ಫಲಪ್ರದ ಮಾತುಕತೆ ನಡೆಯಿತು’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಸೈಯದ್್ ಅಕ್ಬರುದ್ದಿನ್್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.