ನವದೆಹಲಿ (ಐಎಎನ್ಎಸ್): ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗೈರು ಹಾಜರಾಗಿರುವುದನ್ನು ಪಕ್ಷ ಸಾರ್ವಜನಿಕವಾಗಿ ಸಮರ್ಥಿಸಿಕೊಂಡರೂ ಕೆಲವು ಮುಖಂಡರು ಮೋದಿ ತೀರ್ಮಾನದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಮಹತ್ವದ ಸಭೆಯಿಂದ ಮೋದಿ ಹೊರಗುಳಿದಿರುವುದರಿಂದ ಪಕ್ಷಕ್ಕೆ ಮುಜುಗರ ಒಳಗಾಗಿದೆ. ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್ ಮತ್ತು ಎಂ. ವೆಂಕಯ್ಯ ನಾಯ್ಡು ಮೋದಿ ಗೈರುಹಾಜರಿ ಕುರಿತು ಮೊದಲಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ, ಆನಂತರ ಈ ಇಬ್ಬರು ಮುಖಂಡರು, ಮೋದಿ ನವರಾತ್ರಿ ಉಪವಾಸ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೂರ ಉಳಿದಿರುವುದಾಗಿ ಸಮಜಾಯಿಷಿ ನೀಡಿದ್ದಾರೆ.
ಇದೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು, ಮೋದಿ ಅವರ ಗೈರು ಹಾಜರಿ ಪಕ್ಷದಲ್ಲಿನ ಆಂತರಿಕ ಭಿನ್ನಮತದ ಸಂಕೇತ ಎಂಬ ಹೇಳಿಕೆಯನ್ನು ತಿರಸ್ಕರಿಸಿದರು.
`ಅಡ್ವಾಣಿ ಮತ್ತು ಮೋದಿ ನಡುವೆ ಯಾವುದೇ ಮನಸ್ತಾಪವಿಲ್ಲ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡುತ್ತಿದೆ. ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಇದಕ್ಕೆ ಹೋಲುವಂತೆ ವ್ಯಾಖ್ಯಾನ ಮಾಡಿರುವುದು ಸರಿಯಲ್ಲ~ ಎಂದು ಹೇಳಿದರು.
ಅಡ್ವಾಣಿ ತಾವು ನಡೆಸಲಿರುವ ಭ್ರಷ್ಟಾಚಾರ ವಿರೋಧಿ ಯಾತ್ರೆಯ ಉದ್ಘಾಟನೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ರಿಂದ ನೆರವೇರಿಸಲು ನಿರ್ಧರಿಸಿದ್ದಾರೆ. ಇದು ಮೋದಿ ಅವರಿಗೆ ತೀವ್ರ ಅಸಮಾಧಾನ ತಂದಿರುವುದು ಕಾರ್ಯಕಾರಿಣಿಯಿಂದ ದೂರ ಉಳಿಯಲು ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.