ರಾಂಚಿ: ಗೋಮಾಂಸ ಸಾಗಣೆ ಶಂಕೆಯಲ್ಲಿ ವ್ಯಕ್ತಿಯೊಬ್ಬರನ್ನು ಹೊಡೆದು ಕೊಂದಿದ್ದ ಸ್ವಯಂಘೋಷಿತ ಗೋರಕ್ಷಣಾ ಗುಂಪಿನ 11 ಜನರು ತಪ್ಪಿತಸ್ಥರು ಎಂದು ಇಲ್ಲಿನ ವಿಚಾರಣಾ ನ್ಯಾಯಾಲಯವು ತೀರ್ಪು ನೀಡಿದೆ.
ಜಾರ್ಖಂಡ್ನ ರಾಮಗಡ ಜಿಲ್ಲೆಯಲ್ಲಿ 2017ರ ಜೂನ್ನಲ್ಲಿ ಘಟನೆ ನಡೆದಿತ್ತು.
ತಮ್ಮ ಮಾರುತಿ ವ್ಯಾನ್ನಲ್ಲಿ ತೆರಳುತ್ತಿದ್ದ ಮಾಂಸ ವ್ಯಾಪಾರಿ ಅಸ್ಗರ್ ಅನ್ಸಾರಿಯನ್ನು ಗೋರಕ್ಷಣಾ ಗುಂಪು ತಡೆದು, ಹಲ್ಲೆ ನಡೆಸಿತ್ತು. ವ್ಯಾನ್ಗೂ ಬೆಂಕಿ ಹಚ್ಚಿತ್ತು. ಹಲ್ಲೆಯಿಂದಾಗಿ ಅಸ್ಗರ್ ಮೃತಪಟ್ಟಿದ್ದರು.
‘ಗೋಸಂರಕ್ಷಣೆ ಹೆಸರಿನಲ್ಲಿ ಜನರನ್ನು ಕೊಲ್ಲುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ನಮ್ಮ ದೇಶದಲ್ಲಿ ಅವಕಾಶವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಹಲ್ಲೆ ನಡೆದಿತ್ತು.
ಇದೇ 20ರಂದು ತಪ್ಪಿತಸ್ಥರಿಗೆ ನ್ಯಾಯಾಲಯವು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.