ನವದೆಹಲಿ (ಪಿಟಿಐ): ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ ಹಾಗೂ ಅವರ ಆಪ್ತರಿಗೆ ಸೇರಿದ 863 ಕೋಟಿ ರೂಪಾಯಿ ಮೌಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಲ್ಲಿನ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಆಂಧ್ರಪ್ರದೇಶದಲ್ಲಿ ಅಕ್ರಮ ಹಣ ಲೇವಾದೇವಿ ಹಾಗೂ ಮೂಲಸೌಕರ್ಯ ಯೋಜನೆಗಳಲ್ಲಿ ಬೇನಾಮಿಯಾಗಿ ಹಣ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಜಗನ್ ಮತ್ತು ಅವರ ವ್ಯಾಪಾರ ಪಾಲದಾರರಾದ ನಿಮ್ಮಗಡ ಪ್ರಸಾದ್ ಅವರಿಗೆ ಆಸ್ತಿ ಮುಟ್ಟುಗೋಲು ಸಂಬಂಧ ಜಾರಿ ನಿರ್ದೇಶನಾಲಯ ಮಾರ್ಚ್ನಲ್ಲಿ ಪ್ರತ್ಯೇಕ ನೋಟಿಸ್ ಜಾರಿ ಮಾಡಿತ್ತು.
ಜಗನ್ ತಂದೆ ಹಾಗೂ ದಿವಂಗತ ವೈ.ಎಸ್.ರಾಜಶೇಖರ್ ರೆಡ್ಡಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಗುಂಟೂರು ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವದರೇವು ಮತ್ತು ನಿಜಾಮಪಟ್ಟಣಂ ಕೈಗಾರಿಕಾ ಕಾರಿಡಾರ್ ಯೋಜನೆಯ ಅಡಿ ಪ್ರಸಾದ್ ಮತ್ತು ಜಗನ್ ಮೋಹನ್ ಅವರ ಕಂಪೆನಿಗಳಿಗೆ ಅನುಕೂಲ ಮಾಡಿದ್ದರು. ನ್ಯಾಯಾಲಯವು ಆಸ್ತಿ ಮುಟ್ಟುಗೋಲಿಗೆ ಸಮ್ಮತಿ ನೀಡಿರುವುದರಿಂದ ಜಾರಿ ನಿರ್ದೇಶನಾಲಯವು ಶೀಘ್ರವೇ ಆಸ್ತಿ ಸ್ವಾಧೀನ ಪ್ರಕ್ರಿಯೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಗಳಿಗಾಗಿ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಿದ ಆರೋಪ ಸೇರಿದಂತೆ ಹಲವು ಆಪಾದನೆಗಳನ್ನು ಹೊರಿಸಲಾಗಿತ್ತು.