ನವದೆಹಲಿ : ದೆಹಲಿ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಲೆಗೆ ಗಾಯವಾಗಿದ್ದ ರೋಗಿಯ ಕಾಲಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಇಲ್ಲಿನ ಸುಶ್ರುತ ಟ್ರಾಮಾ ಸೆಂಟರ್ನಲ್ಲಿ ಈ ಅಚಾತುರ್ಯ ನಡೆದಿದೆ. ಬೇರೊಬ್ಬ ರೋಗಿಯ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸುವ ಬದಲು ತಲೆಗೆ ಗಾಯವಾಗಿದ್ದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
‘ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದ್ದರಿಂದ ಯಾವ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂಬ ಅರಿವು ರೋಗಿಗೂ ಇರಲಿಲ್ಲ’ ಎಂದು ಆಸ್ಪತ್ರೆಯ ಅಧೀಕ್ಷಕ ಅಜಯ್ ಬಹಲ್ ಹೇಳಿದ್ದಾರೆ. ತಪ್ಪಾಗಿರುವುದು ಗಮನಕ್ಕೆ ಬಂದ ಕೂಡಲೇ ವೈದ್ಯಾಧಿಕಾರಿಗಳು ಆತನಿಗೆ ಸರಿಯಾದ ಚಿಕಿತ್ಸೆ ನೀಡಿದ್ದಾರೆ.
ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದಿದ್ದು, ಯಾವುದೇ ಶಸ್ತ್ರಕ್ರಿಯೆ ನಡೆಸದಂತೆ ತಪ್ಪಿತಸ್ಥ ವೈದ್ಯನಿಗೆ ನಿರ್ಬಂಧ ವಿಧಿಸಲಾಗಿದೆ.
ಇತ್ತೀಚೆಗೆ ಏಮ್ಸ್ನ ವೈದ್ಯರೊಬ್ಬರು ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಡಯಾಲಿಸಿಸ್ ನಡೆಸಿದ್ದರು.