ಹೈದರಾಬಾದ್ (ಐಎಎನ್ಎಸ್): ತೆಲಂಗಾಣ ವಿಮೋಚನಾ ದಿನಾಚರಣೆ ಅಂಗವಾಗಿ ಇಲ್ಲಿನ ಗೋಲ್ಕೊಂಡ ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
1948ರ ಸೆ.17ರಂದು ಹೈದರಾಬಾದ್ ನಿಜಾಮ ಮತ್ತು ಆತನ ರಜಾಕಾರರ ಸೇನೆ ಭಾರತೀಯ ಸೇನೆಗೆ ಶರಣಾಗಿ, ಭಾರತದೊಂದಿಗೆ ಹೈದರಾಬಾದ್ ಸಂಸ್ಥಾನವನ್ನು ವಿಲೀನಗೊಳಿಸಿದ್ದರು. ಇದರ ನೆನಪಿಗೆ ತೆಲಂಗಾಣ ವಿಮೋಚನಾ ದಿನ ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ಗೋಲ್ಕೊಂಡ ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ನಡೆಸಿದ್ದ ಬಿಜೆಪಿಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಹೀಗಾಗಿ ಪೊಲೀಸರು ಕೋಟೆಯ ಸುತ್ತ ತಡೆ ಹಾಕಿ, ಪ್ರವೇಶ ನಿರ್ಬಂಧಿಸಿದ್ದರು.
ತ್ರಿವರ್ಣ ಧ್ವಜದೊಂದಿಗೆ ಬಿಜೆಪಿ ಕಾರ್ಯಕರ್ತರು ಕೋಟೆಯ ಆವರಣ ಪ್ರವೇಶಿಸಲು ಯತ್ನಿಸಿದರು. ಅವರನ್ನು ಪೊಲೀಸರು ತಡೆದರು.
ನಂತರ ಬಿಜೆಪಿ ಕಾರ್ಯಕರ್ತರು ಬಾಪು ಘಾಟ್ನಲ್ಲಿ ಗುಂಪುಗೂಡಿ, ಕೋಟೆಯತ್ತ ಮೆರವಣಿಗೆ ಆರಂಭಿಸಿದರು. ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಮೆರವಣಿಗೆಯನ್ನು ತಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿಯ ತೆಲಂಗಾಣ ಘಟಕದ ಅಧ್ಯಕ್ಷ ಜಿ. ಕೃಷ್ಣಾ ರೆಡ್ಡಿ ಪಕ್ಷದ ಕಚೇರಿಯ ಎದುರು ತ್ರಿವರ್ಣ ಧ್ವಜವನ್ನು ಹಾರಿಸಿ, ‘ತೆಲಂಗಾಣ ವಿಮೋಚನಾ ದಿನಾಚರಣೆಗೆ ಅನುಮತಿ ನೀಡಲು ಸರ್ಕಾರ ನಿರಾಕರಿಸುತ್ತಿರುವುದು ದುರದೃಷ್ಟಕರ. ಸೆ.17 ತೆಲಂಗಾಣ ವಿಮೋಚನಾ ದಿನ ಎಂದು ಅಧಿಕೃತವಾಗಿ ಘೋಷಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಸುಳ್ಳಾಗಿದೆ’ ಎಂದಿದ್ದಾರೆ.
‘ಸರ್ಕಾರ ತನ್ನ ಮಿತ್ರಪಕ್ಷ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್ಗೆ (ಎಂಐಎಂ) ಹೆದರಿ ಹೀಗೆ ನಡೆದುಕೊಳ್ಳುತ್ತಿರಬಹುದು. ರಾಜ್ಯದಲ್ಲಿ ರಜಾಕಾರರು ಇರಬೇಕೇ ಅಥವಾ ತೆಲಂಗಾಣ ಜನತೆ ಇರಬೇಕೇ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನಿರ್ಧರಿಸಲಿ’ ಎಂದು ಅವರು ಕಿಡಿಕಾರಿದ್ದಾರೆ.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾದ ನಂತರ ಬರುತ್ತಿರುವ ಮೊದಲ ತೆಲಂಗಾಣ ವಿಮೋಚನಾ ದಿನ ಇದು. ಹಾಗಿದ್ದರೂ ತೆಲಂಗಾಣ ವಿಮೋಚನಾ ದಿನವನ್ನು ಅಧಿಕೃತವಾಗಿ ಆಚರಿಸಬೇಕು ಎಂಬ ಬಿಜೆಪಿ ಮತ್ತು ಎಡಪಕ್ಷಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ.
ಹೈದರಾಬಾದ್ ರಾಜ್ಯದ ಭಾಗವಾಗಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಅಧಿಕೃತವಾಗಿಯೇ ಈ ದಿನ ಆಚರಿಸಲಾಗುತ್ತಿದೆ ಎಂದು ಬಿಜೆಪಿ ಮತ್ತು ಎಡಪಕ್ಷಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.