ನವದೆಹಲಿ (ಪಿಟಿಐ); ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಿಸುವಂತೆ ಕೋರಿ ಸಲ್ಲಿಸಿರುವ ದಯಾ ಅರ್ಜಿಗಳ ವಿಲೇವಾರಿಗೆ ಕೇಂದ್ರವು ವಿಳಂಬ ಮಾಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಹಾಗೂ ಎಸ್.ಜೆ. ಮುಖ್ಯೋಪದ್ಯಾಯ ಅವರಿದ್ದ ನ್ಯಾಯಪೀಠವು ಎಲ್ಲಾ ರಾಜ್ಯಗಳ ಗೃಹ ಸಚಿವಾಲಯಕ್ಕೆ ತಮ್ಮಲ್ಲಿರುವ ದಯಾ ಅರ್ಜಿಗಳ ಬಗ್ಗೆ ಮೂರು ದಿನಗಳೊಳಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿತು.
1993ರಲ್ಲಿ ರಾಯ್ಸಿನಾ ರಸ್ತೆಯ ಯುವಕಾಂಗ್ರೆಸ್ ಕಚೇರಿ ಬಳಿ ಬಾಂಬ್ ಸ್ಫೋಟಿಸಿ 9 ಜನರ ಸಾವಿಗೆ ಕಾರಣನಾದ ಪಂಜಾಬ್ ಭಯೋತ್ಪಾದಕ ದೇವೇಂದ್ರ ಪಾಲ್ ಸಿಂಗ್ ಬುಲ್ಲಾರ್ ಎಂಬಾತ ತನಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಕೋರಿ ಸಲ್ಲಿಸಿರುವ ದಯಾ ಅರ್ಜಿಯನ್ನು 11ವರ್ಷ ಕಳೆದರೂ ಕೇಂದ್ರ ಸರ್ಕಾರವು ಇನ್ನೂ ಇತ್ಯರ್ಥಪಡಿಸದ ವಿಷಯಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿತು.