ನವದೆಹಲಿ(ಐಎಎನ್ಎಸ್): ನ್ಯೂಯಾರ್ಕ್ನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿ ಅವಮಾನ ಪಡಿಸಿದ ಘಟನೆಗೆ ರಾಜ್ಯಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿದ್ದು, ಪ್ರಮುಖ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯಸಭೆ ಆರಂಭವಾಗುತ್ತಿದ್ದಂತೆಯೇ ದೇವಯಾನಿ ಪ್ರಕರಣದ ಕುರಿತು ಚರ್ಚೆ ನಡೆಸುವಂತೆ ಸದಸ್ಯರು ಒತ್ತಾಯಿಸಿದರು.ಬಳಿಕ ಸಭಾಧ್ಯಕ್ಷ ಹಮೀದ್ ಅನ್ಸಾರಿ ಅವರು ಸದನವನ್ನು 15 ನಿಮಿಷಗಳವರೆಗೆ ಮುಂದೂಡಿದರು. ಅಲ್ಲದೆ ವಿಷಯದ ಚರ್ಚೆ ನಡೆಸುವ ಕುರಿತು ಸರ್ವಪಕ್ಷಗಳ ಸಲಹೆ ಪಡೆದರು.
’ನಮ್ಮ ವಿದೇಶಾಂಗ ನೀತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಎದುರಾಗಿದೆ. ವಿದೇಶಾಂಗ ನೀತಿ ಬದಲಾಗದಿದ್ದರೆ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತವೆ’ ಎಂದು ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಚರ್ಚೆ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಇದು ದೇಶಕ್ಕಾದ ಅವಮಾನ. ಸರ್ಕಾರ ಇದಕ್ಕೆ ತಕ್ಕ ನಿರ್ಧಾರ ತೆಗೆದುಕೊಂಡಿದೆ ಎಂದು ವಾಣಿಜ್ಯ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.
ದೇವಯಾನಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಒತ್ತಾಯಿಸಿದ್ದಾರೆ.
ಇಂತಹ ಪ್ರಕರಣವನ್ನು ಯಾವುದೇ ಸಾರ್ವಭೌಮ ದೇಶವು ಒಪ್ಪಿಕೊಳ್ಳುವುದಿಲ್ಲ. ಈ ವರ್ತನೆ ಬದಲಾಗಬೇಕಿದೆ ಎಂದು ಸಿಪಿಐಎಂನ ಸೀತಾರಾಂ ಯಚೂರಿ ಹೇಳಿದ್ದಾರೆ.