ನವದೆಹಲಿ (ಪಿಟಿಐ): ಮನೆಗೆಲಸದ ಸಹಾಯಕಿಗೆ ವೀಸಾ ಪಡೆಯಲು ಸುಳ್ಳು ಮಾಹಿತಿ ನೀಡಿ ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿದ್ದ ವಿವಾದಿತ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೊಬ್ರಾಗಡೆ ಇದೀಗ ತಾಯ್ನಾಡಿನಲ್ಲಿಯೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಬೈನ ಆದರ್ಶ ವಸತಿ ಸಮುಚ್ಚಯದಲ್ಲಿ ಮನೆ (ಫ್ಲ್ಯಾಟ್) ಪಡೆಯಲು ದೇವಯಾನಿ ಮತ್ತು ಅವರ ತಂದೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಆರೋಪವಿದೆ.
ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರ ಹಾಗೂ ದಾಖಲೆ ಸಂಗ್ರಹಿಸಿದೆ ಎನ್ನಲಾದ ಸಿಬಿಐ, ತಂದೆ ಮತ್ತು ಮಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮನೆ ಖರೀದಿ ವೇಳೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸರ್ಕಾರಿ ಕೋಟಾದ ಅಡಿ ರಿಯಾಯ್ತಿ ದರದಲ್ಲಿ ಈ ಮೊದಲೇ ಪಡೆದಿದ್ದ ಮನೆ ಮತ್ತು ಭೂಮಿಯ ಬಗ್ಗೆ ಮಾಹಿತಿ
ನೀಡದೆ ಮುಚ್ಚಿಟ್ಟಿರುವುದು ಇಬ್ಬರಿಗೆ ಉರುಳಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿಯಾಗಿದ್ದ ಉತ್ತಮ್ ಖೋಬ್ರಾಗಡೆ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮನೆಗೆಲಸದ ಸಹಾಯಕಿಯ ವೀಸಾ ಪಡೆಯಲು ಸುಳ್ಳು ಮಾಹಿತಿ ನೀಡಿದ್ದ ಆರೋಪದ ಮೇಲೆ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರನ್ನು ಅಮೆರಿಕ ಪೊಲೀಸರು ನಡುರಸ್ತೆಯಲ್ಲಿ ಕೈಕೋಳ ತೊಡಿಸಿ ಬಂಧಿಸಿ ಕರೆದೊಯ್ದಿದ್ದರು.
ಈ ಘಟನೆ ಅಮೆರಿಕ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳಲ್ಲಿ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿತ್ತು. ದೇವಯಾನಿ ಬಂಧನ ತಪ್ಪಿಸಲು ಅವರನ್ನು ವಾಪಾಸ್ ಕರೆಸಿಕೊಂಡ ಸರ್ಕಾರ ಇಲ್ಲಿಯೇ ಕರ್ತವ್ಯಕ್ಕೆ ನಿಯೋಜಿಸಿದೆ.
ಆದರ್ಶ ಹಗರಣ ಅವ್ಯವಹಾರಗಳ ತನಿಖೆ ನಡೆಸಿದ್ದ ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎ. ಪಾಟೀಲ್ ಸಮಿತಿ 102 ಜನರ ಪೈಕಿ 25 ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಿತ್ತು.