ನವದೆಹಲಿ: ಚಿತ್ರೀಕರಣದ ವೇಳೆ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕು ಎಂದು ಹಿಂದಿ ಚಿತ್ರನಟ ಗೋವಿಂದಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಸಂತೋಷ ಬತೇಶ್ವರ ರಾಯ್ ಕೋರ್ಟ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಗೋವಿಂದ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿ ಬಾಂಬೈ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಬೇಕು ಎಂದೂ ರಾಯ್ ಅರ್ಜಿಯಲ್ಲಿ ಮನವಿ ಮಾಡಿದ್ದರು.
ರಾಯ್ ಸಲ್ಲಿಸಿದ ವಿಶೇಷ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠ ಗೋವಿಂದ ಅವರಿಗೆ ನೋಟಿಸ್ ಜಾರಿ ಮಾಡಿದೆ. 2008ರ ಜನವರಿಯಲ್ಲಿ ಚಿತ್ರೀಕರಣ ನೋಡಲು ಹೋಗಿದ್ದಾಗ ಗೋವಿಂದ ಅವರು ತಮ್ಮ ಎಡ ಕೆನ್ನೆಗೆ ಹೊಡೆದಿದ್ದರು. ಆಗ ಇದು ಮಾಧ್ಯಮದಲ್ಲಿ ಭಾರಿ ಸುದ್ದಿಯಾಗಿತ್ತು ಎಂದು ರಾಯ್ ಅರ್ಜಿಯಲ್ಲಿ ತಿಳಿಸಿದ್ದಾರೆ.