ನವದೆಹಲಿ (ಪಿಟಿಐ/ಐಎಎನ್ಎಸ್): ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಠ್ಮಂಡುಗೆ ತೆರಳಲಿದ್ದಾರೆ. ನೇಪಾಳ ಪ್ರವಾಸ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನಕಪುರ, ಲುಂಬಿನಿ ಮತ್ತು ಮುಕ್ತಿನಾಥ ಐತಿಹಾಸಿಕ ಸ್ಥಳಗಳ ಭೇಟಿ ರದ್ದುಗೊಂಡಿದ್ದು, ಸಮ್ಮೇಳನ ಮುಗಿಸಿ ಭಾರತಕ್ಕೆ ಮರಳಲಿದ್ದಾರೆ.
ಕಳೆದ ಸಲ ಅವರು ನೇಪಾಳ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜನಕಪುರ, ಲುಂಬಿನಿ ಮತ್ತು ಮುಕ್ತಿನಾಥ್ಕ್ಕೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದ್ದರು.
‘ಅನಿವಾರ್ಯತೆ ಮತ್ತು ಪೂರ್ವ ನಿಗದಿತ ಪ್ರವಾಸದ ಕಾರಣ ಪ್ರಧಾನಿ ಮೋದಿಯವರು ಕೇವಲ ಕಠ್ಮಂಡುಗೆ ಭೇಟಿ ನೀಡಿ ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
‘ಜನಕಪುರ, ಲುಂಬಿನಿ, ಮುಕ್ತಿನಾಥ ಮತ್ತು ನೇಪಾಳದ ಇತರ ಕ್ಷೇತ್ರಗಳಿಗೆ ಆದಷ್ಟು ಬೇಗ ಭೇಟಿ ನೀಡುವುದನ್ನು ಮೋದಿ ಎದುರು ನೋಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ದ್ವೀಪಕ್ಷೀಯ ಮಾತುಕತೆ: ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ದ್ವೀಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನುವುದನ್ನು ಭಾರತ ತಳ್ಳಿಹಾಕಿಲ್ಲ.
ಚೌಕಟ್ಟಿನಲ್ಲಿ ಚರ್ಚೆ: ಈಗಾಗಲೇ ಪಾಕಿಸ್ತಾನ ಒಪ್ಪಿಕೊಂಡಿರುವ ಮಾತುಕತೆಯ ಚೌಕಟ್ಟಿಯನಲ್ಲಿಯೇ ಕಾಶ್ಮೀರ ವಿಷಯವನ್ನು ಚರ್ಚಿಸಬಹುದಾಗಿದೆ ಎಂದು ಭಾರತ ಹೇಳಿದೆ.