ಪಣಜಿ: ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದ ವ್ಯಕ್ತಿಯನ್ನು ಗೋವಾ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೆನ್ನೆತ್ ಸಿಲ್ವಿರಾ ಎಂಬಾತ ಬಂಧಿತ ಆರೋಪಿ. ಈತನ ವಿರುದ್ಧ ಆತಂಕ ಸೃಷ್ಟಿ, ಸುಳ್ಳುಸುದ್ದಿ ಹರಡುವಿಕೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 505ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ಯಾಂಕ್ರಿಯಾಟೈಸಿಸ್(ಮೇದೋಜೀರಕ ಗ್ರಂಥಿ) ತೊಂದರೆಯಿಂದ ಬಳಲುತ್ತಿರುವ ಪರ್ರೀಕರ್ ಸದ್ಯ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೆರಿಕಾಗೆ ತೆರಳುವುದಕ್ಕಿಂತ ಮೊದಲು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಮೇದೋಜೀರಕದ ಉರಿಯೂತಕ್ಕೆ ಚಿಕಿತ್ಸೆ ಪಡೆದಿದ್ದರು. ಫೆಬ್ರುವರಿ 15ರಂದು ಇಲ್ಲಿಗೆ ದಾಖಲಾಗಿದ್ದ ಅವರು ಫೆಬ್ರುವರಿ 22ರಂದು ಮನೆಗೆ ಮರಳಿದ್ದರು.