ನವದೆಹಲಿ (ಪಿಟಿಐ): ಹುದ್ದೆ ತ್ಯಜಿಸುವಂತೆ ಕೇಂದ್ರದ ಎನ್ಡಿಎ ಸರ್ಕಾರದ ಒತ್ತಡಕ್ಕೆ ಮಣಿದಿರುವ ನಾಗಾಲ್ಯಾಂಡ್ ರಾಜ್ಯಪಾಲ ಅಶ್ವನಿ ಕುಮಾರ್ ಹಾಗೂ ಪಶ್ಚಿಮಬಂಗಾಳ ರಾಜ್ಯಪಾಲ ಎಂ.ಕೆ.ನಾರಾಯಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಕೇಂದ್ರಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಶೀಘ್ರವೇ ಹುದ್ದೆಯಿಂದ ನಿರ್ಗಮಿಸುವುದಾಗಿ ಅಶ್ವನಿ ಕುಮಾರ್ ಅವರು ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿ, 63 ವರ್ಷದ ಕುಮಾರ್ ಈ ಮೊದಲು ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಇನ್ನು ಎಂ.ಕೆ.ನಾರಾಯಣನ್ ಅವರು ತಮ್ಮ ರಾಜೀನಾಮೆಗೆ ಸಮಯ ಕೇಳಿದ್ದಲ್ಲದೇ ಈ ಅವಧಿಯಲ್ಲಿ ತಮ್ಮ ಮೇಲೆ ಒತ್ತಡ ಹಾಕಬಾರದು ಎಂದೂ ಹೇಳಿದ್ದಾರೆ ಎನ್ನಲಾಗಿದೆ.
ನಾರಾಯಣನ್ ಕೂಡ ನಿವೃತ್ತ ಐಪಿಎಸ್ ಅಧಿಕಾರಿ. ಇವರು ಗುಪ್ತಚರ ದಳದ ನಿರ್ದೇಶಕರಾಗಿ ಕೆಲಸ ಮಾಡಿದ್ದರು.