ನವದೆಹಲಿ (ಪಿಟಿಐ): ಲಭ್ಯವಿರುವ ತರಂಗಾಂತರ ಹಂಚಿಕೆಯಲ್ಲಿ ಸರ್ಕಾರವು ಪಾರದರ್ಶಕ ಕ್ರಮ ಕೈಗೊಳ್ಳುತ್ತದೆ ಎಂದು ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
`ಭಾರತೀಯ ದೂರಸಂಪರ್ಕ 2012' ಸಮಾವೇಶದಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ದೂರಸಂಪರ್ಕ ಕ್ಷೇತ್ರದ ಬೆಳವಣಿಗೆಯನ್ನು ಪ್ರಚೋದಿಸುವ ನಿಟ್ಟಿನಲ್ಲಿ ಕೇಂದ್ರ ಹಲವಾರು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
`ಕಳೆದ ಕೆಲ ತಿಂಗಳುಗಳಿಂದ ಈ ಕ್ಷೇತ್ರವು ಹಲವಾರು ಕಠಿಣ ಸವಾಲುಗಳನ್ನು ಎದುರಿಸಿದೆ. ಆದಾಗ್ಯೂ, ಆ ಸವಾಲುಗಳೆಲ್ಲವು ಕಪಿಲ್ ಸಿಬಲ್ ಅವರ ವಿಶೇಷ ನಾಯಕತ್ವದ ಅವಧಿಯಲ್ಲಿಗ ಅಂತ್ಯಗೊಳ್ಳುವ ವಿಶ್ವಾಸವಿದೆ. ಅಲ್ಲದೇ, ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರ ದೂರ ಸಂಪರ್ಕ ಕ್ಷೇತ್ರದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ' ಎಂದು ಹೇಳಿದರು.
ಇಲಾಖೆಯಲ್ಲಿರುವ ಸಂಕೀರ್ಣ ವಿಷಯಗಳ ಕುರಿತಾದ ನೀತಿ ನಿರೂಪಣೆಗಳಲ್ಲಿ ಸ್ಪಷ್ಟತೆ ಕಾಯ್ದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವ ತರಂಗಾಂತರ ಹಾಗೂ ಅದರ ಹಂಚಿಕೆಯಲ್ಲಿ ಮಾರುಕಟ್ಟೆ ಸಂಬಂಧಿತ ಪ್ರಕ್ರಿಯೆಯ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.