ಸಾತ್ನಾ/ ಭೋಪಾಲ (ಮಧ್ಯಪ್ರದೇಶ), (ಪಿಟಿಐ/ ಐಎಎನ್ಎಸ್): ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ರಥಯಾತ್ರೆ ಕೈಗೊಂಡಿರುವುದಾಗಿ ಎದುರಾಳಿಗಳು ಮಾಡಿರುವ ಆರೋಪವನ್ನು ನಿರಾಕರಿಸಿರುವ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ, ವಂಶಪಾರಂಪರ್ಯ ರಾಜಕಾರಣದಲ್ಲಿ ನಂಬಿಕೆ ಇಡದ ನಮ್ಮ ಪಕ್ಷ ಪ್ರಧಾನಿ ಹುದ್ದೆ ಅಭ್ಯರ್ಥಿ ಆಯ್ಕೆಗೆ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
`ನಾನು ಪ್ರಧಾನಿ ಹುದ್ದೆ ಪೈಪೋಟಿಯಲ್ಲಿ ಇಲ್ಲ~ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಧಾನಿಯನ್ನೂ ಲೋಕಪಾಲ್ ಮಸೂದೆ ವ್ಯಾಪ್ತಿಗೆ ತರುವ ಪ್ರಸ್ತಾವಕ್ಕೆ ತಮ್ಮ ಸಹಮತ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲಂಚ ಆರೋಪ: ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿಯು ಅಡ್ವಾಣಿ ಅವರ ರಥಯಾತ್ರೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
`ಕಪ್ಪುಹಣದ ವಿರುದ್ಧ ಹುಯಿಲೆಬ್ಬಿಸುತ್ತಿರುವ ಬಿಜೆಪಿ ಸ್ವತಃ ಯಾತ್ರೆಗೆ ಕಪ್ಪುಹಣವನ್ನು ಬಳಸುತ್ತಿದೆ~ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಾಂತಿಲಾಲ್ ಭುರಿಯಾ ಟೀಕಿಸಿದ್ದಾರೆ. ಕೆಲವು ಪತ್ರಕರ್ತರಿಗೆ ತಲಾ 500 ರೂಪಾಯಿ ಲಂಚ ಕೊಡಲಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಸ್ಥಳೀಯ ಘಟಕ ಅಲ್ಲಗಳೆದಿದೆ.
ತನಿಖೆಗೆ ಸೂಚನೆ: ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಡ್ವಾಣಿ, ವಿಷಯವನ್ನು ತನಿಖೆಗೆ ಒಳಪಡಿಸುವಂತೆ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ, ಸಾತ್ನಾದಲ್ಲಿ ಅಡ್ವಾಣಿ ಅವರ ಯಾತ್ರೆಗೆ ಕಪ್ಪು ಬಾವುಟ ತೋರಿಸಲು ಮುಂದಾದ ಸುಮಾರು ಎರಡು ಡಜನ್ ಕಾಂಗ್ರೆಸ್ ಕಾರ್ಯಕರ್ತರನ್ನು ಶುಕ್ರವಾರ ಸ್ಥಳೀಯ ಪೊಲೀಸರು ಬಂಧಿಸಿದರು.