ನವದೆಹಲಿ (ಪಿಟಿಐ): ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಸಂಪುಟದಲ್ಲಿ ಕಾಂಗ್ರೆಸ್ ಸಚಿವರೊಬ್ಬರಿಗೆ ನೀಡಿದ್ದ ಎರಡು ಖಾತೆಗಳಲ್ಲಿ ಒಂದನ್ನು ಕಸಿದುಕೊಂಡ ಬಗ್ಗೆ ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ, `ಸಮ್ಮಿಶ್ರ ಧರ್ಮವು ಏಕಪಕ್ಷೀಯ ನಿರ್ಧಾರಕ್ಕೆ ಅನುಮತಿ ನೀಡುವುದಿಲ್ಲ~ ಎಂಬ ನಿಷ್ಠುರ ಸಂದೇಶ ಕಳುಹಿಸಿದೆ.
ಆದರೂ `ತೃಣಮೂಲ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸಿದ ನಂತರ ಬಿಕ್ಕಟ್ಟು ನಿವಾರಣೆಯಾಗಬಹುದು~ ಎಂಬ ವಿಶ್ವಾಸದೊಂದಿಗೆ ತಟಸ್ಥ ಮತ್ತು ರಾಜಿ ಸಂಧಾನದ ನಿಲುವು ತಾಳುವ ಮಂತ್ರವನ್ನೂ ಎಐಸಿಸಿ ಪಠಿಸಿದೆ.
`ಪಶ್ಚಿಮಬಂಗಾಳಕ್ಕೆ ಸಂಬಂಧಿಸಿದಂತೆ ಕಠಿಣ ಅಥವಾ ತೀಕ್ಷ್ಣ ಪದಗಳ ವಿನಿಮಯದಿಂದ ಸಮಸ್ಯೆ ಬಗೆಹರಿಯದು. ಪರಸ್ಪರ ಮಾತುಕತೆಯೊಂದಿಗೆ ತಟಸ್ಥ ಮತ್ತು ತಾಳ್ಮೆಯ ಮನೋಭಾವನೆ ಅಗತ್ಯ~ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.