ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ ಅವರ ನೇತೃತ್ವದ ನ್ಯಾಯಮಂಡಳಿ ಸೋಮವಾರ ಸಮ್ಮತಿಸಿತು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದು ನೀರಿಗೆ ಹಾಹಾಕಾರ ತಲೆದೋರಿರುವುದರಿಂದ ಈ ವಿವಾದವನ್ನು ಬೇಗ ಪರಿಹರಿಸಬೇಕೆಂದು ಕರ್ನಾಟಕ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿ ಅಂಗೀಕರಿಸಿತು.
ಇದಕ್ಕೂ ಮೊದಲು ಶೀಘ್ರ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ನ್ಯಾಯಮಂಡಳಿಗೆ ಬರೆದಿದ್ದ ಪತ್ರವನ್ನು ಕರ್ನಾಟಕ ಬುಧವಾರ ಹಿಂದಕ್ಕೆ ಪಡೆದಿತ್ತು. ಈ ಪತ್ರಕ್ಕೆ ನ್ಯಾಯಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಕರ್ನಾಟಕ ಕ್ಷಮೆ ಯಾಚಿಸಿತ್ತು.
ಸೋಮವಾರದ ವಿಚಾರಣೆ ವೇಳೆ ಕರ್ನಾಟಕದ ವಕೀಲ ನಿಶಾಂತ ಪಾಟೀಲ ಹಾಜರಿದ್ದರು.
ಒಪ್ಪದ ಗೋವಾ: ಮಹಾದಾಯಿ ವಿವಾದವನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ತನ್ನ ವಿರೋಧವಿಲ್ಲ. ಆದರೆ, ಕರ್ನಾಟಕದಲ್ಲಿ ಬರಗಾಲವಿದೆ ಎಂಬ ವಾದವನ್ನು ಒಪ್ಪುವುದಿಲ್ಲ ಎಂದು ವಿವಾದದಲ್ಲಿ ಭಾಗಿಯಾಗಿರುವ ಗೋವಾ, ನ್ಯಾಯಮಂಡಳಿಯ ಮುಂದೆ ಸ್ಪಷ್ಟಪಡಿಸಿತು.