ನವದೆಹಲಿ: ಅರ್ಜಿ ನಮೂನೆಯಲ್ಲಿ ಹುಟ್ಟಿದ ದಿನಾಂಕ ಮತ್ತು ಹೆಸರನ್ನು ಬರೆಯುವಾಗ ಆಗುವ ಕಾಗುಣಿತ ದೋಷವನ್ನೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯ ಆಯ್ಕೆಯನ್ನು ಕೇಂದ್ರ ಲೋಕಸೇವಾ ಆಯೋಗವು (ಯುಪಿ ಎಸ್ಸಿ) ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಜಯ್ ಕುಮಾರ್ ಮಿಶ್ರಾ ಅವರನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಯುಪಿಎಸ್ಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ಮತ್ತು ಯು.ಯು.ಲಲಿತ ಅವರಿದ್ದ ಪೀಠವು ಮೇಲಿನಂತೆ ತೀರ್ಪು ನೀಡಿದೆ.
ಮಿಶ್ರಾ ಅವರು ಅರ್ಜಿ ತುಂಬುವಾಗ ಪ್ರಮಾದವಶಾತ್ ಹುಟ್ಟಿದ ದಿನಾಂಕವನ್ನು ಜುಲೈ 10, 1998 ಎಂದು ಬರೆಯುವ ಬದಲು ಜುಲೈ 11, 1998 ಎಂದು ಬರೆದಿದ್ದರು. ಇದನ್ನೇ ದೊಡ್ಡ ತಪ್ಪು ಎಂದು ಪರಿಗಣಿಸಿ ಯುಪಿಎಸ್ಸಿ ಅವರ ಆಯ್ಕೆಯನ್ನು ರದ್ದುಪಡಿಸಿತ್ತು.
ಪ್ರವೇಶ ಚೀಟಿಯನ್ನು ಡೌನ್ಲೋಡ್ ಮಾಡುವಾಗ ಹುಟ್ಟಿದ ದಿನಾಂಕ ತಪ್ಪಾಗಿ ನಮೂದಾಗಿರುವುದನ್ನು ಗಮನಿಸಿದ ಮಿಶ್ರಾ, ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಆದರೆ ಯುಪಿಎಸ್ಸಿ ಅವರ ಜನ್ಮ ದಿನಾಂಕವನ್ನು ಸರಿಪಡಿಸಲು ಒಪ್ಪದೇ ಮಿಶ್ರಾ ಆಯ್ಕೆಯನ್ನು ರದ್ದುಪಡಿಸಿತ್ತು.