ನವದೆಹಲಿ: ಲೋಕಪಾಲ ಮಸೂದೆಗೆ ಹಲವು ತಿದ್ದುಪಡಿ ತಂದ ನಂತರವಷ್ಟೇ ಅದನ್ನು ಮುಂಬರುವ ಬಜೆಟ್ ಅಧಿವೇಶನ ಸಂದರ್ಭ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಬುಧವಾರ ಸರ್ಕಾರ ಹೇಳಿಕೆ ನೀಡಿರುವುದರಿಂದ ಬಹುನಿರೀಕ್ಷಿತ ಈ ಮಸೂದೆ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ರಾಜ್ಯಸಭೆಯಲ್ಲಿ ಈ ಸಂಬಂಧ ಮಾತನಾಡಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ, `ಸಚಿವ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂಬರುವ ಬಜೆಟ್ ಅಧಿವೇಶನದಲ್ಲಿ ಲೋಕಪಾಲ ಮಸೂದೆಯನ್ನು ಮಂಡಿಸಲಾಗುತ್ತಿದೆ. ಆಯ್ಕೆ ಸಮಿತಿ ವರದಿಯಂತೆ ಮಸೂದೆಗೆ ಅಗತ್ಯ ತಿದ್ದುಪಡಿ ಮಾಡಿ ಮಂಡಿಸಲಾಗುತ್ತಿದ್ದು, ನಂತರ ಸದನ ಇದನ್ನು ಪರಿಶೀಲಿಸಲಿದೆ' ಎಂದು ತಿಳಿಸಿದರು.
ಲೋಕಪಾಲ ಮಸೂದೆ ಆಯ್ಕೆ ಸಮಿತಿಯ ವರದಿಯನ್ನು ಚರ್ಚೆಗೆ ಒದಗಿಸದ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಿಪಿಎಂ ಸದಸ್ಯರಾದ ಕೆ.ಎನ್. ಬಾಲಗೋಪಾಲ ಹಾಗೂ ಪಿ. ರಾಜೀವಿ ಅವರನ್ನು ರಾಜ್ಯಸಭೆ ವಿರೋಧಪಕ್ಷದ ನಾಯಕ ಅರುಣ್ ಜೇಟ್ಲಿ ಬೆಂಬಲಿಸಿದ ಸಂದರ್ಭ ಮಧ್ಯಪ್ರವೇಶಿಸಿದ ಸ್ವಾಮಿ ಈ ಹೇಳಿಕೆ ನೀಡಿದರು.
ಲೋಕಪಾಲ ಮಸೂದೆಗೆ ವಿರೋಧ ವ್ಯಕ್ತವಾದಾಗ ಈ ಕುರಿತು ವರದಿ ನೀಡಲು ರಾಜ್ಯಸಭೆಯ ಸ್ಥಾಯಿ ಸಮಿತಿಗೆ ಬದಲು ಆಯ್ಕೆ ಸಮಿತಿಗೆ ಕೇಳಿಕೊಳ್ಳಲಾಗಿತ್ತು. ಇದೀಗ ವರದಿ ಬಂದಿರುವುದರಿಂದ ಈ ಬಗ್ಗೆ ಚರ್ಚೆಗೆ ಸಮಯ ನಿಗದಿ ಮಾಡಬೇಕಾಗಿದೆ ಎಂದು ಜೇಟ್ಲಿ ಒತ್ತಾಯಿಸಿದರು.