ನವದೆಹಲಿ (ಐಎಎನ್ಎಸ್): ವೈದ್ಯೆಯೊಬ್ಬರ ಮೇಲೆ ಆಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕರನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.
ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯ ವೈದ್ಯೆ ಅಮೃತಾ ಕೌರ್ (30) ಆಸಿಡ್ ದಾಳಿಗೊಳಗಾದವರು. ಕೌರ್ ಅವರ ಸಹೋದ್ಯೋಗಿ ಅರವಿಂದ್ ಯಾದವ್ ತನ್ನ ಸ್ನೇಹಿತ ವೈಭವ್ ಎಂಬಾತನೊಂದಿಗೆ ಸೇರಿ ಕೃತ್ಯದ ಸಂಚು ರೂಪಿಸಿದ್ದ.
ತನ್ನನ್ನು ಮದುವೆಯಾಗುವಂತೆ ಕೌರ್ ಅವರನ್ನು ಅರವಿಂದ್ ಒತ್ತಾಯಿಸುತ್ತಿದ್ದ. ಅರವಿಂದ್ ಪ್ರಸ್ತಾಪವನ್ನು ನಿರಾಕರಿಸಿದ್ದ ಕೌರ್ ಅವರಿಗೆ, ಎಂಟು ತಿಂಗಳ ಹಿಂದೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಇದರಿಂದ ಕುಪಿತಗೊಂಡಿದ್ದ ಅರವಿಂದ್, ಆಸಿಡ್ ದಾಳಿ ನಡೆಸಲು ಇಬ್ಬರು ಬಾಲಕರಿಗೆ ಸುಪಾರಿ ನೀಡಿದ್ದ.