ಲಖನೌ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಎಸ್ಪಿ ಸರ್ಕಾರಕ್ಕೆ ಅಲ್ಲಿನ ಶಾಸಕರು ತಲೆನೋವಾಗಿ ಪರಿಣಮಿಸಿದ್ದಾರೆ.ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಕಳ್ಳತನದ ಸುಳ್ಳು ಆರೋಪ ಹೊರಿಸಿ ಆಕೆಯನ್ನು ಜೈಲಿಗೆ ಕಳುಹಿಸಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ ಶಾಸಕ ಪುರುಷೋತ್ತಮ್ ನರೇಶ್ ದ್ವಿವೇದಿ ಸಾಲಿಗೆ ಈಗ ಇನ್ನೊಬ್ಬ ಶಾಸಕ ಸೇರ್ಪಡೆಯಾಗಿದ್ದಾರೆ.
ಬಿಎಸ್ಪಿ ಶಾಸಕ ಶಿವಪ್ರಸಾದ್ ಯಾದವ್ ಅವರು ನಡೆಸುತ್ತಿರುವ ಶಾಲೆಯ ಪ್ರಾಂಶುಪಾಲರೊಬ್ಬರು ಇಟವಾ ಜಿಲ್ಲೆಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ, ಆಕೆಯನ್ನು ಬಂಧಿಸುವಂತೆ ಮಾಡಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಿನ್ಸಿಪಾಲ್ ವಿನೋದ್ ಅವಾಸ್ತಿ ಮತ್ತು ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ. ಪ್ರಕರಣದಲ್ಲಿ ಶಾಸಕ ಯಾದವ್ ನೇರವಾಗಿ ಪಾಲ್ಗೊಳ್ಳದಿದ್ದರೂ, ಆರೋಪಿಯನ್ನು ರಕ್ಷಿಸಲು ಸಹಕರಿಸಿದ ಕಾರಣದಿಂದ ಅವರ ಮೇಲೆ ಸಹ ಪ್ರಕರಣ ದಾಖಲು ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ಮನೆಗೆ ಆಗಮಿಸಿದ ಅವಾಸ್ತಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಆಕೆ ದೂರು ದಾಖಲು ಮಾಡಲು ಯತ್ನಿಸಿದಾಗ ಆಕೆಯನ್ನು ನಿರ್ಬಂಧಿಸಲಾಯಿತು. ಅತ್ಯಾಚಾರ ನಡೆದ ಎರಡು ದಿನಗಳ ನಂತರ ಮಹಿಳೆಯ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದ.