ಬಂಧನದಲ್ಲಿರುವ ಇಂದ್ರಾಣಿ ಮುಖರ್ಜಿ, ಅವರ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶಾಮ್ ರಾಯ್ ಅವರನ್ನು ಕಾರಾಗೃಹದಲ್ಲೇ ವಿಚಾರಣೆ ನಡೆಸಲು ಕನಿಷ್ಠ ಮೂರು ವಾರಗಳ ಕಾಲ ಅವಕಾಶ ನೀಡಬೇಕು ಎಂದು ಸಿಬಿಐ ಕೋರ್ಟ್ಗೆ ಮನವಿ ಮಾಡಿತ್ತು.
‘ಇದುವರೆಗೆ ಈ ಪ್ರಕರಣದ ವಿಚಾರಣೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದರು. ಸಿಬಿಐ ತನಿಖೆಯ ಜವಾಬ್ದಾರಿ ವಹಿಸಿಕೊಂಡು ಕೆಲವು ದಿನಗಳಷ್ಟೇ ಕಳೆದಿದೆ. ಹಾಗಾಗಿ ಆರೋಪಿಗಳನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಮುಂಬೈ ಪೊಲೀಸರು ನೀಡಿರುವ ತನಿಖಾ ವರದಿಯನ್ನೇ ಅವಲಂಬಿಸಬೇಕಾಗುತ್ತದೆ’ ಎಂದು ಸಿಬಿಐ ನ್ಯಾಯಾಲಯಕ್ಕೆ ಕೇಳಿಕೊಂಡಿತ್ತು.
ಆತ್ಮಹತ್ಯೆಗೆ ಯತ್ನಿಸಿ ಸದ್ಯ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಂದ್ರಾಣಿ ಮುಖರ್ಜಿಗೆ ಸಂಬಂಧಿಸಿದ ದಾಖಲೆಗಳನ್ನೂ ಪೊಲೀಸರು ಮಂಗಳವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
‘ಒಂದು ವೇಳೆ ಸಿಬಿಐ ಜೈಲಿನಲ್ಲೇ ವಿಚಾರಣೆ ನಡೆಸಲು ಮುಂದಾದರೆ ಅದಕ್ಕೆ ಸಹಕರಿಸಲು ಇಂದ್ರಾಣಿ ಮುಖರ್ಜಿ ಸಿದ್ಧರಿದ್ದಾರೆ’ ಎಂದು ಅವರ ಪರ ವಕೀಲ ಗುಂಜನ್ ಮಂಗಳಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.