ನವದೆಹಲಿ (ಪಿಟಿಐ): ನಿಗೂಢವಾಗಿ ಸಾವನ್ನಪ್ಪಿದ ಸುನಂದಾ ಪುಷ್ಕರ್ ಮರಣೋತ್ತರ ಪರೀಕ್ಷೆ ವರದಿ ತಿರುಚಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ನಿರ್ದೇಶಕ ಡಾ. ಎಂ.ಸಿ. ಮಿಶ್ರಾ ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಏಮ್ಸ್ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ ಗುಪ್ತಾ ಆರೋಪಿಸಿದ್ದಾರೆ.
‘ಸುನಂದಾ ಪುಷ್ಕರ್ ನಿಗೂಢ ಸಾವನ್ನು ಸಹಜ ಸಾವು ಎಂಬಂತೆ ವರದಿ ನೀಡುವಂತೆ ಡಾ. ಮಿಶ್ರಾ ತಮ್ಮ ಮೇಲೆ ಒತ್ತಡ ಹೇರಿದ್ದರು. ಆದರೆ, ಯಾವ ಒತ್ತಡ, ಪ್ರಭಾವಕ್ಕೂ ಮಣಿಯದ ನಾನು ನೈಜ ವರದಿ ನೀಡಿದ್ದೇನೆ’ ಎಂದು ಕೇಂದ್ರ ಆರೋಗ್ಯ ಸಚಿವ ಮತ್ತು ಏಮ್ಸ್ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರದಲ್ಲಿ ಆರೋಪಿಸಿದ್ದಾರೆ.
ಪುಷ್ಕರ್ ಪ್ರಕರಣದಲ್ಲಿ ವೃತ್ತಿಗೆ ನಿಷ್ಠರಾಗಿ ನಡೆದುಕೊಳ್ಳದ ಡಾ. ಗುಪ್ತಾ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಲು ಅನುಮತಿ ನೀಡುವಂತೆ ಕೋರಿ ಏಮ್ಸ್ ಮಂಗಳವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.