ನವದೆಹಲಿ (ಪಿಟಿಐ): ಸೇನೆಯ ವೈದ್ಯರೊಬ್ಬರಿಗೆ ಇದೇ ಮೊದಲ ಬಾರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನ ಮಾಡಲಾಗುತ್ತಿದೆ. ಈ ಮೂಲಕ ಸೇನೆಯಲ್ಲಿ ವೈದ್ಯರ ಸೇವೆಯನ್ನು ದೊಡ್ಡದಾಗಿ ಸ್ಮರಿಸುವ ಕಾರ್ಯ ನಡೆದಿದೆ.
ಕಾಬೂಲ್ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಶೌರ್ಯ ಮೆರೆದ ಮೇಜರ್ ಲೈಶ್ರಮ್ ಜ್ಯೋತಿನ್ ಸಿಂಗ್ ಅವರಿಗೆ ಗಣರಾಜ್ಯೋತ್ಸವ ದಿನದಂದು ಈ ಪ್ರಶಸ್ತಿ ನೀಡಲಾಗುತ್ತಿದೆ. ಜ್ಯೋತಿನ್ ಸಿಂಗ್ ಪರವಾಗಿ ಯಾರು ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ ಎನ್ನುವುದು ಸೇನೆಯ ಅಧಿಕಾರಿಗಳಿಗೆ ತಿಳಿದಿಲ್ಲ. ಸಿಂಗ್ ಅವರ ತಂದೆ ಅನಾರೋಗ್ಯ ಪೀಡಿತರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರೆ, ಅವರನ್ನು ನೋಡಿಕೊಳ್ಳುತ್ತಿರುವ ಸಹೋದರನಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿದೆ.