ಕನ್ನೂರು: ಜಗದಲ್ಪುರ–ಭುವನೇಶ್ವರ ಎಕ್ಸ್ಪ್ರೆಸ್ ರೈಲು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಹಳಿತಪ್ಪಿದ್ದು, 32 ಜನ ಸಾವಿಗೀಡಾಗಿದ್ದಾರೆ. 100 ಮಂದಿ ಗಾಯಗೊಂಡಿದ್ದಾರೆ.
ರೈಲು ಭುವನೇಶ್ವರದಿಂದ ಜಗದಲ್ಪುರಕ್ಕೆ ಸಂಚರಿಸುತ್ತಿತ್ತು. ವಿಜಯನಗರಂ ಜಿಲ್ಲೆಯ ಕನ್ನೂರು ರೈಲುನಿಲ್ದಾಣದ ಸಮೀಪ ರಾತ್ರಿ 11ಕ್ಕೆ ರೈಲಿನ 9 ಬೋಗಿಗಳು ಹಳಿತಪ್ಪಿವೆ. ಇನ್ನೂ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೂರ್ವ ಕರಾವಳಿ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಪಿ. ಮಿಶ್ರಾ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಒಡಿಶಾ ಡಿಜಿಪಿ ಕೆ.ಬಿ. ಸಿಂಗ್ ಹೇಳಿದ್ದಾರೆ.
ರೈಲು ಹಳಿ ತಿರುಚಿರುವುದು ಅವಘಟಕ್ಕೆ ಕಾರಣ ಇರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವ ಸಮೀಪಿಸುತ್ತಿದೆ ಹಾಗೂ ಇದು ನಕ್ಸಲ್ಪೀಡಿತ ವಲಯ. ಆದ್ದರಿಂದ, ಹಳಿಗೆ ಹಾನಿಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾಗಿ ವರದಿಯಾಗಿದೆ.