ನವದೆಹಲಿ: ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನ್ಯಾಯಾಧೀಶರ ಸಮಿತಿ (ಕೊಲಿಜಿಯಂ) ನೇಮಕ ಮಾಡುವ ವ್ಯವಸ್ಥೆ ಬದಿಗೊತ್ತುವ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ’ಗೆ ಅನುಮೋದನೆ ನೀಡುವಂತೆ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ ಶೇ 50ರಷ್ಟು ರಾಜ್ಯಗಳ ಅನುಮೋದನೆ ಅಗತ್ಯವಾಗಿದ್ದು, ರಾಜಸ್ತಾನ, ಗೋವಾ ಮತ್ತು ತ್ರಿಪುರಾ ಶಾಸನ ಸಭೆಗಳು ಈಗಾಗಲೇ ಒಪ್ಪಿಗೆ ನೀಡಿವೆ. ಗುಜರಾತ್ ವಿಧಾನಸಭೆಯೂ ತಿದ್ದುಪಡಿಗೆ ಅನುಮತಿ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ ಎಂದು ಸದಾನಂದಗೌಡ ಬುಧವಾರ ಪತ್ರಿಕಾ ಗೋಷ್ಠಿ-ಯಲ್ಲಿ ತಿಳಿಸಿದರು.
ಸದ್ಯದಲ್ಲೇ ವಿಧಾನಮಂಡಲಗಳ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಅನೇಕ ರಾಜ್ಯಗಳು ಅನುಮೋದನೆ ನೀಡುವ ಸಾಧ್ಯತೆಯಿದೆ. ಮಸೂದೆ ಬೆಂಬಲಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ರಾಜ್ಯಗಳ ಅನುಮತಿ ಬಳಿಕ ಮಸೂದೆ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಹೋಗಲಿದೆ.
ಎರಡು ದಶಕದ ಹಿಂದೆ ಜಾರಿಗೆ ಬಂದಿರುವ ಕೊಲಿಜಿಯಂ ವ್ಯವಸ್ಥೆ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಕಾರಣ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಉದ್ದೇಶಿಸಲಾಗಿದೆ. ಈ ಮಸೂದೆಯನ್ನು ಆಗಸ್ಟ್ನಲ್ಲಿ ಸಂಸತ್ ಅಂಗೀಕರಿಸಿದೆ. ನ್ಯಾಯಾಂಗ ನೇಮಕಾತಿ ಆಯೋಗ ಅಸ್ತಿತ್ವಕ್ಕೆ ಬಂದರೆ ಎಲ್ಲ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆ ಅದರ ವ್ಯಾಪ್ತಿಗೆ ಬರಲಿದೆ.
ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಖ್ಯಸ್ಥರಾಗಿರುತ್ತಾರೆ. ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಇಬ್ಬರು ಗಣ್ಯ ವ್ಯಕ್ತಿಗಳು ಹಾಗೂ ಕಾನೂನು ಸಚಿವರು ಸದಸ್ಯರಾಗಿರುತ್ತಾರೆ.