ನಾಗಪುರ, ಮಹಾರಾಷ್ಟ್ರ (ಪಿಟಿಐ): ‘ರಜೆ’ಯ ಮೇಲೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮುಂದಿನ ವಾರದ ಆರಂಭದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಕಮಲ್ ನಾಥ್ ತಿಳಿಸಿದ್ದಾರೆ.
ಕಲ್ಮೇಶ್ವರದಲ್ಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಟೆಕ್ನಾಲಜಿಯ ವಾರ್ಷಿಕ ಘಟಿಕೋತ್ಸವದ ಅಂಗವಾಗಿ ಅವರು ಬುಧವಾರ ಮಾತನಾಡಿದರು.
‘ರಾಹುಲ್ ಗಾಂಧಿ ಅವರು ಮುಂದಿನ ಐದು ದಿನಗಳಲ್ಲಿ ಮರಳಲಿದ್ದಾರೆ. ಪಕ್ಷದ ನೇತೃತ್ವವನ್ನು ವಹಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ’ ಎಂದು ತಿಳಿಸಿದರು.
ದೆಹಲಿ ವಿಧಾನಸಭೆಯಲ್ಲಿ ಎದುರಾದ ಹೀನಾಯ ಸೋಲಿನ ಬಳಿಕ ಪಕ್ಷ ಸಂಘಟನೆಯ ಮೇಲೆ ಗಮನ ಹರಿಸಲು ರಾಹುಲ್ ಅವರು ರಜೆಯ ಮೇಲೆ ತೆರಳಿದ್ದಾರೆ. ಇದಕ್ಕಾಗಿ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಅವರು ಗೈರಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಎಐಸಿಸಿ ಅಧಿವೇಶನದಲ್ಲಿ ರಾಹುಲ್ ಅವರಿಗೆ ಪಕ್ಷದ ಅಧ್ಯಕ್ಷರ ಹೊಣೆ ನೀಡುವ ಸಾಧ್ಯತೆಗಳಿವೆ.